ನವದೆಹಲಿ (ಐಎಎನ್ಎಸ್): ಭ್ರಷ್ಟಾಚಾರ ತಡೆಗಟ್ಟಲು ಶ್ರಮಿಸುತ್ತಿರುವ ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಜೊತೆಗೆ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೊ) ಕೈಜೋಡಿಸಿದೆ.ಭ್ರಷ್ಟ ನೌಕರರು/ಅಧಿಕಾರಿಗಳ ವಿರುದ್ಧ ಅಂತರ್ಜಾಲ ಮುಖೇನ ದೂರು ನೀಡುವ ಯೋಜನೆ `ವಿಗ್ಐ' ಅನ್ನು `ಸಿವಿಸಿ' ರೂಪಿಸಿದ್ದು, ಇದನ್ನು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್ಆರ್ಡಿ) ಸಚಿವಾಲಯದ ಜೊತೆಗೂಡಿ `ಇಗ್ನೊ' ದೇಶವ್ಯಾಪಿ ಇರುವ ತನ್ನ 67 ಪ್ರಾದೇಶಿಕ ಕೇಂದ್ರಗಳ ಮೂಲಕ ಪ್ರಚಾರ ಮಾಡಲಿದೆ.
ಮೊಬೈಲ್ ಮೂಲಕ ಸಹ ದೂರ ದಾಖಲಿಸುವ ಅವಕಾಶ ಇದೆ. ಭ್ರಷ್ಟಾಚಾರದಲ್ಲಿ ತೊಡಗಿದವರ ಛಾಯಾಚಿತ್ರ, ಧ್ವನಿಮುದ್ರಿಕೆ ಮತ್ತು ದೃಶ್ಯವನ್ನು ಸೆರೆಹಿಡಿದು ದೂರು ದಾಖಲಿಸುವಂತಹ ವಿಶೇಷ ವಿನ್ಯಾಸ ಈ ಯೋಜನೆಯಲ್ಲಿ ಇದೆ ಎಂದು `ಸಿವಿಸಿ' ಆಯುಕ್ತ ಆರ್. ಶ್ರೀಕುಮಾರ್ ಅವರು `ಇಗ್ನೊ' ಆವರಣದಲ್ಲಿ ಟೆಲಿಕಾನ್ಫರೆನ್ಸ್ ಮೂಲಕ ಭಾನುವಾರ ತಿಳಿಸಿದ್ದಾರೆ.
`ಈ ಯೋಜನೆಯನ್ನು ಸಾರ್ವಜನಿಕರು ಉಪಲಬ್ಧ ಮಾಡಿಕೊಳ್ಳಲು ಖಾಲಿ (ಬ್ಲ್ಯಾಂಕ್) ಎಸ್ಎಂಎಸ್ ಅಥವಾ ್ಖಐಎಉ್ಗಉ ಎಂದು 09223174440 ಸಂಖ್ಯೆ ಎಸ್ಎಂಸ್ ಕಳುಹಿಸಬೇಕು. ಆಗ `ವಿಗ್ಐ' ಯೋಜನೆ ನೋಂದಣಿಗೆ ಅಗತ್ಯವಾದ ಲಿಂಕ್ನ ಎಸ್ಎಂಎಸ್ ಬರುತ್ತದೆ. ನೋಂದಣಿಗೊಂಡ ನಂತರ ದೂರು ನೀಡಬಹುದು' ಎಂದಿದ್ದಾರೆ.
ಈ ಮಧ್ಯೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಲುವಾಗಿ ನೈತಿಕತೆ ಮತ್ತು ಜಾಗೃತಿ ಕುರಿತಂತೆ ಪಠ್ಯಕ್ರಮವನ್ನು ಶೀಘ್ರದಲ್ಲೇ ಅಳವಡಿಸಲಾಗುವುದು ಎಂದು `ಇಗ್ನೊ' ಹೇಳಿದೆ.