ಬಳ್ಳಾರಿ: ಮನುಷ್ಯನಲ್ಲಿ ಆತ್ಮೀಯತೆ ಕಡಿಮೆಯಾಗಿ, ಅಜ್ಞಾನವೆಂಬ ಅಂಧಕಾರ ಶುರುವಾಗುತ್ತದೋ ಅಲ್ಲಿ ಭ್ರಷ್ಟಾಚಾರ ಮನೆಮಾಡುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು.
ನಗರದ ಬಸವಭವನದಲ್ಲಿ ಮಂಗಳವಾರ ವರ್ತಕರು ಹಾಗೂ ಉದ್ಯಮಿಗಳಿಗಾಗಿ ಏರ್ಪಡಿಸಲಾಗಿದ್ದ ’ವ್ಯವಹಾರ ಮತ್ತು ಆಧ್ಯಾತ್ಮ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಆಧ್ಯಾತ್ಮ ಮತ್ತು ಜ್ಞಾನದ ದೀವಿಗೆ ಹಚ್ಚಬೇಕಾಗಿದೆ. ಈ ನಿಟ್ಟಿನಲ್ಲಿ ಆರ್ಟ್ ಲಿವಿಂಗ್ ಸಂಸ್ಥೆ ಮುಂದಾಗಿದೆ ಎಂದು ಅವರು ತಿಳಿಸಿದರು.
ಉದ್ಧಾರ: ಪರಕೀಯರ ಆಡಳಿತದಿಂದ ದೇಶವನ್ನು ಮುಕ್ತಗೊಳಿಸಲಾಗಿದ್ದರೂ, ಭಾರತೀಯರ ಉದ್ಧಾರದಲ್ಲಿ ವ್ಯಾಪಾರಿಗಳು ಮತ್ತು ವಾಣಿಜ್ಯೋದ್ಯಮಿಗಳ ಪಾತ್ರ ಮುಖ್ಯವಾಗಿದೆ. ಅದರಲ್ಲೂ ಜಿಲ್ಲೆಯು, ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ವಾಣಿಜ್ಯದಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಂಡಿದೆ ಎಂದು ಅವರು ತಿಳಿಸಿದರು.
ಪಾರಂಪರಿಕವಾದ ವ್ಯಾಪಾರಸ್ಥರಿಗೆ ಪೂರಕವಾದ ಯೋಜನೆಗಳನ್ನು ರೂಪಿಸದ್ದರಿಂದ ಕೆಲವು ವ್ಯಾಪಾರಸ್ಥರ ಆತ್ಮಬಲ, ಮನಃಶಾಂತಿ ಕುಂದಿದ್ದು, ಇದನ್ನು ಬಲಪಡಿಸಲು ಆಧ್ಯಾತ್ಮ ಮತ್ತು ಧ್ಯಾನದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆ ಅಧ್ಯಕ್ಷ ಜೆ.ಸತ್ಯನಾರಾಯಣ, ಕೆ.ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು. ಕೆ.ಬಸವರಾಜ ಸ್ವಾಗತಿಸಿದರು.