ಚಿತ್ರದುರ್ಗ: ನಗರದಲ್ಲಿ ಶನಿವಾರವೂ ಭ್ರಷ್ಟಾಚಾರ ವಿರುದ್ಧ ಕೂಗು ಪ್ರತಿ ಧ್ವನಿಸಿತು. ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು,
ಜನಪ್ರತಿನಿಧಿಗಳು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಿ ಭ್ರಷ್ಟಾಚಾರದ ವಿರುದ್ಧ ಸಮರದಲ್ಲಿ ಪಾಲ್ಗೊಂಡರು.
ರೋಟರಿ ಕ್ಲಬ್ ವಿಂಡ್ಮಿಲ್, ರೋಟರಿ ಕ್ಲಬ್ ಫೋರ್ಟ್, ವಾಸವಿ ಮಹಿಳಾ ಸಂಘ, ರೋಟರಿ ಕ್ಲಬ್, ಧರಣಿ ಸಂಸ್ಥೆ ಪದಾಧಿಕಾರಿಗಳು ನಗರಸಭೆಯಿಂದ ಗಾಂಧಿ ವೃತ್ತದ ಮೂಲಕ ಒನಕೆ ಓಬವ್ವ ವೃತ್ತದವರೆಗೆ ಮೆರವಣಿಗೆ ನಡೆಸಿ ಭ್ರಷ್ಟಾಚಾರದ ವಿರುದ್ಧ ಘೋಷಣೆ ಹಾಕಿದರು. ‘ಅಂದು ಗಾಂಧಿ, ಇಂದು ಹಜಾರೆ’, ‘ಭ್ರಷ್ಟಾಚಾರ ವಿರುದ್ಧ ಭಾರತ, ಎರಡನೇ ಸ್ವಾತಂತ್ರ್ಯ ಹೋರಾಟ’ ಎನ್ನುವ ಫಲಕಗಳನ್ನು ಪ್ರದರ್ಶಿಸಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಅಲ್ಲಾಬಕ್ಷ, ವೀರಭದ್ರಸ್ವಾಮಿ, ರಮಾ ನಾಗರಾಜ್, ಜ್ಯೋತಿ ಲಕ್ಷ್ಮಣ್, ಡಿ.ಕೆ. ಶೀಲಾ, ಅನುರಾಧಾ ರವಿಶಂಕರ್, ಸೌಮ್ಯಾ ರವಿಶಂಕರ್ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಲೋಕಪಾಲ್ ಮಸೂದೆ ಜಾರಿಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ಪದಾಧಿಕಾರಿಗಳು ಶನಿವಾರ ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿದರು.
ಭ್ರಷ್ಟಾಚಾರ ನಿಯಂತ್ರಣಕ್ಕೆ ಅಣ್ಣಾ ಹಜಾರೆ ಆರಂಭಿಸಿರುವ ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಮುಖಂಡರು ನುಡಿದರು.
ಬೆಂಗಳೂರು ವಿಭಾಗ ಅಧ್ಯಕ್ಷ ಎಸ್.ಎ. ನಾರಾಯಣಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಹಾಲಿಂಗಪ್ಪ, ಓಂಕಾರಪ್ಪ, ಟಿ. ಚಂದ್ರಪ್ಪ, ಕೆ.ಪಿ. ತಿಪ್ಪೇಸ್ವಾಮಿ, ಪ್ರಕಾಶ್, ನೇಹ ಮಲ್ಲೇಶ್, ಬೀರಾವರ, ಎನ್. ಮಂಜಪ್ಪ ಹಾಜರಿದ್ದರು.