11ನೇ ತರಗತಿ ಪ್ರಾರಂಭ ಸಧ್ಯಕ್ಕಿಲ್ಲ
ಬೆಂಗಳೂರು, ಏ. 15- ಸೆಕೆಂಡರಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮದ ಮೇರೆಗೆ ಮುಂದಿನ ಶಿಕ್ಷಣ ವರ್ಷದಿಂದ ಪ್ರಾರಂಭಿಸಬೇಕಾಗಿದ್ದ 11ನೇ ತರಗತಿಗಳನ್ನು ತೆರೆಯುವುದನ್ನು ಮುಂದೂಡಲು ಸರ್ಕಾರ ನಿರ್ಧರಿಸಿದೆಯೆಂದು ತಿಳಿದುಬಂದಿದೆ.
ಈಗಾಗಲೇ 11ನೇ ತರಗತಿಗಳನ್ನು ನಡೆಸುತ್ತಿರುವ ರಾಜ್ಯದ 13 ಹೈಯರ್ ಸೆಕೆಂಡರಿ ಶಾಲೆಗಳಿಗೆ ಅವನ್ನು ಮುಚ್ಚಿಬಿಡಲು ಸೂಚನೆ ನೀಡಲಾಗಿದೆಯೆಂದು ಹೇಳಲಾಗಿದೆ.
ಮತ್ತೆ ದಾಳಿ ನಡೆದಲ್ಲಿ ಪರಿಣಾಮಕಾರಿ ಪ್ರಚಾರ ಕಾರ್ಯಕ್ಕೆ ಕ್ರಮ
ನವದೆಹಲಿ, ಏ. 15- ಗಡಿ ಪ್ರದೇಶದಲ್ಲಿ ಮತ್ತೆ ಹೋರಾಟ ಆರಂಭವಾದಲ್ಲಿ ಪರಿಣಾಮಕಾರಿ ಪ್ರಚಾರ ಕಾರ್ಯ ನಿರ್ವಹಿಸಲು ಯೋಜನೆಯೊಂದನ್ನು ಸಿದ್ಧಗೊಳಿಸುವುದಕ್ಕಾಗಿ ಉನ್ನತಮಟ್ಟದ ಸಮಿತಿಯೊಂದನ್ನು ರಚಿಸಬೇಕೆಂದು ಕೇಂದ್ರ ಅಧಿಕಾರಿಗಳು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಯುದ್ಧರಂಗದಲ್ಲಿನ ಸೈನಿಕರ ವಿಶೇಷ ಅಗತ್ಯಗಳ ಪೂರೈಕೆ, ವ್ಯವಸಾಯ ಮತ್ತು ಕೈಗಾರಿಕಾ ಚಟುವಟಿಕೆಗಳ ಪ್ರಚಾರ ಇವೆಲ್ಲಕ್ಕೂ ಅನ್ವಯಿಸುವಂತೆ ಈ ಯೋಜನೆ ರೂಪುಗೊಳ್ಳಲಿದೆ.