ಕರ್ನಾಟಕ ಸರ್ಕಾರವು 2008-09ರಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡಲು ಪ್ರತಿ ಕಾಲೇಜಿನಲ್ಲಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಜೊತೆಗೆ ಅತ್ಯಾಧುನಿಕ 15 ಕಂಪ್ಯೂಟರ್ಗಳು, ಪ್ರಿಂಟರ್, ಸ್ಕ್ಯಾನರ್, ಪ್ರೊಜೆಕ್ಟರ್, ಕ್ಯಾಮರಾ ಸೌಲಭ್ಯವನ್ನು ನೀಡುವುದಾಗಿ ಪ್ರಕಟಿಸಿತು.
ಸಮರ್ಪಕ ಕಂಪ್ಯೂಟರ್ ಶಿಕ್ಷಣ ಬೋಧನೆ ಮಾಡಲು ಪೂರ್ಣಕಾಲಿಕ ಸಿಬ್ಬಂದಿಯನ್ನು ನೇಮಿಸುವುದರೊಂದಿಗೆ ಪ್ರತಿ ಕಾಲೇಜಿಗೆ ಸುಮಾರು 3 ರಿಂದ 4 ಲಕ್ಷ ರೂಪಾಯಿ ಖರ್ಚುಮಾಡಿ ಉತ್ತಮ ಯೋಜನೆ ಜಾರಿಗೆ ತಂದಿತು.
ಆದರೆ ಗಂಗಾವತಿ ನಗರದಲ್ಲಿನ ಬಾಲಕಿಯರ ಮತ್ತು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಳೆದ 3 ಮೂರು ವರ್ಷಗಳಿಂದ ಒಬ್ಬ ವಿದ್ಯಾರ್ಥಿಗೂ ಇದರ ಲಾಭ ದೊರಕಿಲ್ಲ.
ಪ್ರತಿ ತಿಂಗಳು ತಪ್ಪದೇ ಸಂಸ್ಥೆ ವತಿಯಿಂದ ಕಂಪ್ಯೂಟರ್ ಶಿಕ್ಷಣ ಕಲಿತ ವಿದ್ಯಾರ್ಥಿನಿಯರ ಯಾದಿ ಮತ್ತು ಅವರ ಹಾಜರಾತಿ ವರದಿಯು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸುತ್ತಿರುವುದು ಗೊತ್ತಾಗಿದೆ.
ಇದಕ್ಕೆ ಪ್ರತಿಯಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರತಿ ಕಾಲೇಜಿಗೆ ಸಿಬ್ಬಂದಿ ಸಂಬಳ, ಇಂಟರ್ನೆಟ್ ಚಾರ್ಜ್, ವಿದ್ಯುತ್ ಬಿಲ್ ಸೇರಿ ಪ್ರತಿ ತಿಂಗಳು ಗುತ್ತಿಗೆ ಪಡೆದ ಸಂಸ್ಥೆಗೆ ಸುಮಾರು 15,000 ರೂಪಾಯಿ ನಿರ್ವಹಣಾ ವೆಚ್ಚವಾಗಿ ಪಾವತಿ ಮಾಡುತ್ತಿದೆ.
ಈ ಯೋಜನೆಗಾಗಿ ಇರುವ ಹಣವನ್ನು ಕಾಲೇಜು ಸಿಬ್ಬಂದಿ ದುರುಪಯೋಗ ಮಾಡಿಕೊಳ್ಳುತ್ತಿರುವ ಶಂಕೆ ಇದೆ. ಸಂಬಂಧಪಟ್ಟವರು ರಾಜ್ಯದ ಎಲ್ಲಾ ಕಾಲೇಜುಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿ ಬಡ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವರೇ?