ರಾಯಚೂರು: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಬೇಡ ಎಂಬ ಬೇಡಿಕೆ ಇಟ್ಟುಕೊಂಡು ಸೀಮಾಂಧ್ರ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ಒಂದು ತಿಂಗಳಿಂದ ನಡೆಯುತ್ತಿದ್ದು, ಮಂತ್ರಾಲಯಕ್ಕೆ ಬರುವ ಭಕ್ತರು ಸಾರಿಗೆ ತೊಂದರೆ ಎದುರಿಸುವಂತಾಗಿದೆ.
ರಾಘವೇಂದ್ರಸ್ವಾಮಿಗಳ 342ನೇ ಆರಾಧನಾ ಮಹೋತ್ಸವ ನಿಮಿತ್ತ ಆಗಸ್ಟ್ 19 ರಿಂದ 25ರ ವರೆಗೆ ಕರ್ನಾಟಕದ ಬಸ್ಗಳು ಮಂತ್ರಾಲಯಕ್ಕೆ ಬಂದು ಹೋಗಲು ಸೀಮಾಂಧ್ರ ಪ್ರತಿಭಟನಕಾರರು ಅವಕಾಶ ಕೊಟ್ಟಿದ್ದರು. ಆದರೆ, ಆಂಧ್ರಪ್ರದೇಶದ ಬಸ್ಗಳ ಸಂಚಾರ ಇರಲಿಲ್ಲ.
ಆದರೆ, ಆರಾಧನೆ ಬಳಿಕ ಪ್ರತಿಭಟನೆ ತೀವ್ರಗೊಂಡ ಕಾರಣ ಕರ್ನಾಟಕ ಹಾಗೂ ಇತರ ಭಾಗದ ಬಸ್ಗಳೂ ಮಂತ್ರಾಲಯಕ್ಕೆ ಬರುತ್ತಿಲ್ಲ.
ಬೆಂಗಳೂರಿನಿಂದ ಬರುವ ಬಸ್ಗಳು ಪ್ರತಿಭಟನೆ ಹಿನ್ನೆಲೆಯಲ್ಲಿ ಮಾರ್ಗ ಬದಲಿಸಿವೆ. ರಾಯಚೂರು ಮಾರ್ಗವಾಗಿ ಬಂದು ಕರ್ನಾಟಕ ಗಡಿಭಾಗದಲ್ಲಿರುವ ಗಿಲ್ಲೇಸುಗೂರು ಗ್ರಾಮದಲ್ಲಿ ನಿಲುಗಡೆ ಮಾಡುತ್ತವೆ. ಇಲ್ಲಿಂದ ಮಂತ್ರಾಲಯಕ್ಕೆ ಭಕ್ತರು ಟಂಟಂ ಆಟೋದಲ್ಲಿ ಒಬ್ಬರಿಗೆ 20 ರೂಪಾಯಿ ( ಈ ಮೊದಲು 10 ರೂಪಾಯಿ ಇತ್ತು) ಕೊಟ್ಟು ಪ್ರಯಾಣಿಸುತ್ತಿದ್ದಾರೆ.
`ಬಸ್ ಸಂಚಾರ ಇದ್ದರೂ ಸೀಮಾಂಧ್ರ ಪ್ರತಿಭಟನೆ ಕಾರಣದಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಕಲೆಕ್ಷನ್ ನಿರ್ದಿಷ್ಟ ಮಟ್ಟದಲ್ಲಿ ಆಗುತ್ತಿಲ್ಲ' ಎಂದು ಗಿಲ್ಲೆಸುಗೂರು ಬಸ್ ನಿಲ್ದಾಣದಲ್ಲಿದ್ದ ಸುವಿಹಾರಿ ಬಸ್ಗಳ ಚಾಲಕರು-ನಿರ್ವಾಹಕರು `ಪ್ರಜಾವಾಣಿ'ಗೆ ತಿಳಿಸಿದರು.
ರಾಯಚೂರು- ಮಂತ್ರಾಲಯ ಬಸ್ಗಳೂ ಗಿಲ್ಲೇಸುಗೂರಿನಲ್ಲೇ ನಿಲ್ಲುತ್ತಿವೆ. ಹೀಗಾಗಿ ಸಾರಿಗೆ ಸಂಸ್ಥೆ ಆದಾಯ ಅರ್ಧಕ್ಕರ್ಧ ಕಡಿಮೆ ಆಗಿದೆ. ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗಕ್ಕೆ ನಿತ್ಯ 4.5 ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ವಿಭಾಗೀಯ ಅಧಿಕಾರಿ ವೆಂಕಟೇಶ್ವರರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು.