ಬೆಂಗಳೂರು: ಅಫಜಲಪುರ ತಾಲ್ಲೂಕಿನ ಬಡದಾಳ್ ಗ್ರಾಮದಲ್ಲಿ ಬಾನಾಮತಿ ಹೆಸರಿನಲ್ಲಿ ಬಾಲಕನನ್ನು ಅಪಹರಿಸಿ ಕೊಲೆ ಮಾಡಿರುವ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು.
ಶೂನ್ಯವೇಳೆಯಲ್ಲಿ ಕೊಲೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಸದಸ್ಯ ಮಾಲೀಕಯ್ಯ ಗುತ್ತೇದಾರ್ ಅವರು `ಪದೇ ಪದೇ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಇದರ ಹಿಂದೆ ದೊಡ್ಡ ಜಾಲವಿದೆ. ಪೊಲೀಸರೂ ಇದರಲ್ಲಿ ಭಾಗಿಯಾಗಿದ್ದಾರೆ. ಸಿಐಡಿ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ~ ಎಂದರು.
ಮಹಾರಾಷ್ಟ್ರದಲ್ಲಿ ಈ ರೀತಿಯ ದಂದೆ ನಡೆಯುತ್ತಿದ್ದು, ಗಡಿ ಭಾಗದ ಮಕ್ಕಳನ್ನು ಬಾನಾಮತಿಗೆ ಬಳಸಿಕೊಳ್ಳಲಾಗುತ್ತಿದೆ. ಕೊಲೆ ಮಾಡಿದ ಆರೋಪಿಗಳು ಯಾರೆಂಬುದು ಪೊಲೀಸರಿಗೆ ಗೊತ್ತಿದೆ. ಅವರು ಕ್ರಮ ಕೈಗೊಳ್ಳದ ಕಾರಣ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆಗಲೇಬೇಕು ಎಂದು ಪಟ್ಟುಹಿಡಿದರು. ಒತ್ತಡಕ್ಕೆ ಮಣಿದ ಸದಾನಂದ ಗೌಡ ಅವರು ಸಿಐಡಿ ತನಿಖೆ ನಡೆಸಲಾಗುವುದು ಎಂದು ಪ್ರಕಟಿಸಿದರು.