ಬೆಂಗಳೂರು: `ಮಕ್ಕಳ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಮಕ್ಕಳ ಕೂಟವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಿಬಿಎಂಪಿ ಬಜೆಟ್ನಲ್ಲಿ ಕೂಟಕ್ಕೆ ಒಂದು ಲಕ್ಷ ರೂಪಾಯಿ ಅನುದಾನ ಒದಗಿಸಲಾಗುವುದು~ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ಭರವಸೆ ನೀಡಿದರು.
ಅಖಿಲ ಕರ್ನಾಟಕ ಮಕ್ಕಳ ಕೂಟವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ, `ಮದುವೆಯಾದ, ಕೆಲವೇ ದಿನಗಳಿಗೆ ವಿಧವೆಯಾದ ಆರ್.ಕಲ್ಯಾಣಮ್ಮ ಅವರ ಜೀವನ ಕಷ್ಟದಿಂದಲೇ ಕೂಡಿತ್ತು. ಆದರೆ ಮಕ್ಕಳ ಶ್ರೇಯೋಭಿವೃದ್ಧಿ ಕನಸು ಕಂಡ ಅವರು ದಿಟ್ಟತನದಿಂದ ಮಕ್ಕಳ ಕೂಟವನ್ನು ಸ್ಥಾಪನೆ ಮಾಡಿದ್ದರು. ಇದೇ ಸಂಸ್ಥೆಯು ಇಂದು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ~ ಎಂದು ಹರ್ಷ ವ್ಯಕ್ತಪಡಿಸಿದರು.
`ಕೂಟವು ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಅವರಲ್ಲಿ ಅಭಿರುಚಿ ಬೆಳೆಸಲು ನೆರವಾಗುತ್ತಿದೆ~ ಎಂದರು. ಇದೇ ಸಂದರ್ಭದಲ್ಲಿ ಕೂಟದ ಮೈದಾನದ ಆರ್.ಕಲ್ಯಾಣಮ್ಮ ಅವರ ಪುತ್ಥಳಿಅನಾವರಣ ಮಾಡಲಾಯಿತು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ್ ತೆಂಗಿನಕಾಯಿ, ಪಾಲಿಕೆ ಸದಸ್ಯ ಬಿ.ವಿ.ಗಣೇಶ್, ಕೂಟದ ಅಧ್ಯಕ್ಷ ಟಿ.ವಿ.ಮಾರುತಿ ಇತರರು ಉಪಸ್ಥಿತರಿದ್ದರು.
ಮೇಲ್ಸೇತುವೆ ವಿನ್ಯಾಸ ಬದಲಾಯಿಸಲು ಚಿಂತನೆ |
`ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಅದರ ವಿನ್ಯಾಸವನ್ನು ಬದಲಾಯಿಸುವ ಚಿಂತನೆ ನಡೆದಿದೆ~ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ಸ್ಪಷ್ಟಪಡಿಸಿದರು. ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಯ ಮೇಲೆ ವೃಷಭಾವತಿ ಕಾಲುವೆಯ ನೀರು ಹರಿಯುವ ಸಾಧ್ಯತೆಯಿದೆ. ಹಾಗಾಗಿ ಕೊನೆಯ ಹಂತದ ಮೇಲ್ಸೇತುವೆಯ ವಿನ್ಯಾಸವನ್ನು ಬದಲಿಸಲಾಗುವುದು~ ಎಂದು ಪ್ರತಿಕ್ರಿಯಿಸಿದರು. `ಶನಿವಾರ ರಾತ್ರಿ ಸುರಿದ ಮಳೆಗೆ ಕೆಲವೆಡೆ ಮರಗಳು ಉರುಳಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಈ ಬಗ್ಗೆ ನಗರ ಸಂಚಾರ ನಡೆಸಿ ಹಲವೆಡೆ ಪರಿಶೀಲನೆ ನಡೆಸಿದ್ದೇನೆ. ಕರ್ತವ್ಯಕ್ಕೆ ಹಾಜರಾಗದೇ ಇರುವ ಪಾಲಿಕೆಯ ಎಂಜಿನಿಯರ್ಗಳನ್ನು ಅಮಾನತು ಮಾಡಲು ಆದೇಶ ನೀಡಲಾಗಿದೆ. ಇನ್ನು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗದಂತೆ ವ್ಯವಸ್ಥೆ ಮಾಡಲಾಗಿದೆ~ ಎಂದು ಹೇಳಿದರು. |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.