ದೇವನಹಳ್ಳಿ: ಆಹಾರ ಪದ್ಧತಿಯಲ್ಲಿನ ಬದಲಾವಣೆ ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ದೇಶದ ಶೇ.19ರಷ್ಟು ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ನಾರಾಯಣ ನೇತ್ರಾಲಯದ ಡಾ.ನರೇಂದ್ರ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಹುಟ್ಟಿದ ಮಗುವಿನಿಂದ ವಯೋವೃದ್ಧ ತನಕ ವಿವಿಧ ಪ್ರಕಾರಗಳಲ್ಲಿ ದೃಷ್ಟಿದೋಷ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಕೃಷಿ ಮತ್ತು ಕೂಲಿ ಕಾರ್ಮಿಕರು ತಮ್ಮ ಕಣ್ಣುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದರು.
ಮಾಜಿ ಸಂಸದ ಹಾಗೂ ಕೇಂದ್ರ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಡಾ.ಸುಬ್ಬಸೋಮ ಮಾತನಾಡಿ, ಇಳಿವಯಸ್ಸಿನಲ್ಲಿ ದೃಷ್ಟಿದೋಷದಿಂದ ನರಳುವ ವೃದ್ಧರನ್ನು ಕುಟುಂಬದ ಸದಸ್ಯರೇ ನಿರ್ಲಕ್ಷಿಸುವುದು ಸಲ್ಲದು ಎಂದರು.
ಪಾಂಡಿಚೇರಿಯ ಮಾಜಿ ಮಂತ್ರಿ ಕಂದಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತಿರುವರಂಗ ವಿ.ನಾರಾಯಣ ಸ್ವಾಮಿ, ಶಾಸಕ ಕೆ.ವೆಂಕಟಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಆರ್.ರವಿ ಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಚಿನ್ನಪ್ಪ, ಜಿಲ್ಲಾ ಜೆಡಿಯು ಸಂಚಾಲಕ ಎಸ್.ಪಿ.ಗಾಂಧಿ, ಕೀರ್ತಿ ಪ್ರದಾಯಕ ಸೇವಾ ಸಂಘದ ಅಧ್ಯಕ್ಷ ನಾಗಚೂಡಯ್ಯ, ಕಾರ್ಯದರ್ಶಿ ಹರ್ಷಿತಾ ಗಾಂಧಿ, ಕೇಂದ್ರ ಆಹಾರ ಮತ್ತು ನಾಗರಿಕ ಇಲಾಖೆ ಸದಸ್ಯ ಪ್ರಭಾಕರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಸಿ.ಮುನಿರಾಜ್, ಜಿ.ಪಂ ಸದಸ್ಯ ಬಿ.ರಾಜಣ್ಣ, ಡಾ.ದೀಪಕ್. ಡಾ.ಪಾರ್ವತಿ, ಡಾ.ಫಣಿ ಕಿಶೋರ್ ಇದ್ದರು.
ಬೆಂಗಳೂರು ನಾರಾಯಣ ನೇತ್ರಾಲಯ ಹಾಗೂ ಕೀರ್ತಿ ಪ್ರದಾಯಕ ಸೇವಾ ಸಂಘಗಳ ಸಹಯೋಗದಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.