ಗಾಯಕ ರಘು ದೀಕ್ಷಿತ್ ಆವತ್ತು ಮಕ್ಕಳ ಜತೆ ಮಗುವಾಗಿದ್ದರು. ಪುಟಾಣಿಗಳು ಬಿಡಿಸಿದ ಚಿತ್ರಗಳನ್ನು ಕಂಡು ಸೋಜಿಗ ಪಟ್ಟುಕೊಂಡರು. ಪುಟ್ಟ ಮಗುವೊಂದು ತದೇಕಚಿತ್ತವಾಗಿ ಗದ್ದಕ್ಕೆ ಕೈಕೊಟ್ಟು ಆನೆಗೆ ಯಾವ ಬಣ್ಣ ತುಂಬಬೇಕು ಎಂದು ಯೋಚಿಸುತ್ತಿದ್ದಾಗ ಆ ಮಗುವನ್ನು ಮುದ್ದಿಸಿ, `ತಗೋ ಈ ಬಣ್ಣ ತುಂಬು~ ಎಂದು ನೆರವಾದರು. ಸ್ಪರ್ಧೆಯ ವೇಳೆ ಮಕ್ಕಳು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರ ಮನ ಗೆದ್ದರು. ಜತೆಗೆ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ನೀಡಿ ತಾವೂ ಖುಷಿಪಟ್ಟರು.
ಅದು ಮಕ್ಕಳ ಕಾರ್ಯಕ್ರಮ. ಮಕ್ಕಳ ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡುವ ಸಲುವಾಗಿ ವೈದ್ಯರ ಸಮೂಹ ಪ್ರಾರಂಭಿಸಿರುವ ಅಡ್ರೆಸ್ ಹೆಲ್ತ್ ಸಂಸ್ಥೆ ಈಚೆಗೆ ಮಕ್ಕಳಿಗಾಗಿ ಚಿತ್ರಕಲೆ ಮತ್ತು ಕಲರಿಂಗ್ ಸ್ಪರ್ಧೆ ಏರ್ಪಡಿಸಿತ್ತು. 200ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದ ಈ ಸ್ಪರ್ಧೆ ತೀವ್ರ ಪೈಪೋಟಿಗೆ ಸಾಕ್ಷಿಯಾಯಿತು. ಸ್ಪರ್ಧೆಯಲ್ಲಿ ಪೂರ್ವಿ ಹೆಗ್ಡೆ ಮತ್ತು ಸಿಥಿಜ್ ಶೆಟ್ಟಿ ಪ್ರಥಮ ಬಹುಮಾನ ಗೆದ್ದುಕೊಂಡರು. ಅವರಿಗೆ ಬೈಸಿಕಲ್ ಮತ್ತು ಮಕ್ಕಳ ಸ್ಕೂಟರ್ ನೀಡಲಾಯಿತು. ಇದಲ್ಲದೆ 16 ಸಮಾಧಾನಕರ ಬಹುಮಾನಗಳನ್ನೂ ವಿತರಿಸಲಾಯಿತು. ಎಲ್ಲ ಬಹುಮಾನಗಳೂ ಮಕ್ಕಳ ಫಿಟ್ನೆಸ್ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿತ್ತು. `ಆರೋಗ್ಯಶಾಲಿ ಮಕ್ಕಳೇ ಸುಖೀ ಮಕ್ಕಳು~ ಎಂಬ ಸಂದೇಶ ಇದರ ಹಿಂದಿನ ಉದ್ದೇಶವಾಗಿತ್ತು.