ಮಡಿಕೇರಿ: ನಗರದ ಓಂಕಾರೇಶ್ವರ ದೇವಸ್ಥಾನಕ್ಕೆ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹಾಗೂ ಶಾಸಕ ಅಪ್ಪಚ್ಚು ರಂಜನ್ ಅವರು ಶನಿವಾರ ಸಂಜೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.
ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ರಮೇಶ್ ಹೊಳ್ಳ ಅವರು, ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದಿಂದ ದೊರೆತಿರುವ ರೂ 33 ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು, ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮುಜರಾಯಿ ಇಲಾಖೆಯಿಂದ ದೊರೆತಿರುವ ರೂ 10 ಲಕ್ಷ ಹಾಗೂ ದೇವಸ್ಥಾನ ಸಮಿತಿಯ ರೂ 3 ಲಕ್ಷ ಸೇರಿದಂತೆ ಒಟ್ಟು ರೂ 46 ಲಕ್ಷ ಅನುದಾನದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಸಮುದಾಯ ಭವನದ ಜೊತೆ ಗೋಶಾಲೆ, ಅಡುಗೆ ಕೊಠಡಿ, ಊಟದ ಕೊಠಡಿ ನಿರ್ಮಿಸಲಾಗುತ್ತಿದೆ ಎಂದರು.
ಂಕಾರೇಶ್ವರ ದೇವಸ್ಥಾನದ ಎದುರು ಇರುವ ಆಂಜನೇಯ ದೇವಸ್ಥಾನ ಹಾಗೂ ಕೋಟೆ ಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ರೂ.3ಕೋಟಿ ಹೊಸ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದರು.
ಇದರಲ್ಲಿ ಪುರೋಹಿತರು, ದೇವಸ್ಥಾನದ ಸಿಬ್ಬಂದಿಗೆ ವಸತಿಗೃಹ ನಿರ್ಮಿಸುವುದು, ದೇವಸ್ಥಾನದ ಸುತ್ತ ಆವರಣ ನಿರ್ಮಿಸುವ ಯೋಜನೆ ಇದೆ ಎಂದು ಅವರು ಹೇಳಿದರು.
ಯಾತ್ರಿ ನಿವಾಸ ನಿರ್ಮಾಣ: ಸಮುದಾಯ ಭವನದ ಮೇಲೆ ಯಾತ್ರಿ ನಿವಾಸವೊಂದನ್ನು ನಿರ್ಮಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಕೇಳಿಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು ರೂ 1.25 ಕೋಟಿ ಹಣ ಮೀಸಲಿಡಲಾಗಿದೆ ಎಂದರು.