ಮಡಿಕೇರಿ: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಮಡಿಕೇರಿಯ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಬಾಲಭವನದಲ್ಲಿ ಒಂದು ವಾರ ನಡೆಯುವ ಖಾದಿ ಉತ್ಸವಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್.ಎಸ್.ಪ್ರಕಾಶ್ ಸೋಮವಾರ ಚಾಲನೆ ನೀಡಿದರು.
ಖಾದಿ ಉತ್ಸವ ಮತ್ತು ಮಾರಾಟ ಮೇಳದಲ್ಲಿ ಖಾದಿ, ರೇಷ್ಮೆ ಬಟ್ಟೆ, ಉಣ್ಣೆ ಬಟ್ಟೆ, ಅಪ್ಪಟ ರೇಷ್ಮೆ ಸೀರೆಗಳು ಸಿದ್ಧಉಡುಪು ಅಲ್ಲದೆ ಗ್ರಾಮೋದ್ಯೋಗ ಉತ್ಪನ್ನಗಳಾದ ಜೇನು, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಆಯುರ್ವೇದ ಔಷಧಿ , ಚನ್ನಪಟ್ಟಣದ ಕರಕುಶಲ ವಸ್ತು ಸೇರಿ ಮತ್ತಿತರ ವಸ್ತುಗಳು ಮಾರಾಟಕ್ಕಿವೆ.
ಖಾದಿ ಮತ್ತು ಉಣ್ಣೆ ಉತ್ಪನ್ನಗಳಿಗೆ ಶೇ.35ರಷ್ಟು, ರೇಷ್ಮೆ ಉತ್ಪನ್ನಗಳಿಗೆ ಶೇ. 20ರಷ್ಟು ವಿಶೇಷ ರಿಯಾಯಿತಿ ಇದೆ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಎಂ.ಟಿ. ಹರಿಶ್ಚಂದ್ರ ತಿಳಿಸಿದರು.
ಗದಗ ಜಿಲ್ಲೆಯ ಉಣ್ಣೆ ಉತ್ಪನ್ನಗಳು ಆಕರ್ಷಣೀಯವಾಗಿವೆ. ಮೈಸೂರಿನ ಕಾಂಡಿಮೆಂಟ್, ಚಿಕ್ಕಬಳ್ಳಾಪುರ, ಕೋಲಾರ, ವಿಜಾಪುರ, ಶಿವಮೊಗ್ಗ ಮತ್ತಿತರ ಜಿಲ್ಲೆಗಳ ಖಾದಿ ಉತ್ಪನ್ನಗಳು ಮಾರಾಟದಲ್ಲಿವೆ.
ಸೈನಿಕ ಕಲ್ಯಾಣ ಇಲಾಖೆಯ ಬಿ.ಆರ್.ಶೆಟ್ಟಿ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪ ನಿರ್ದೇಶಕ ಎಸ್. ರಾಜಯ್ಯ, ಜಿಲ್ಲಾ ವಾರ್ತಾಧಿಕಾರಿ ವಿನೋದ್ಚಂದ್ರ, ಕೈಗಾರಿಕಾ ಉತ್ತೇಜನಾಧಿಕಾರಿ ರಾಜಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಎಚ್.ಆರ್.ಶಿವಣ್ಣ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಗುರುಸ್ವಾಮಿ ಹಾಜರಿದ್ದರು.