ಮಹದೇವಪುರ: ಮಹದೇವಪುರ ಕ್ಷೇತ್ರದ ಹಗದೂರು ಗ್ರಾಮದಲ್ಲಿನ ಶ್ರೀರಾಮ ಮಂದಿರದ ಹಿಂದಿನ ರಸ್ತೆಯ ಬದಿಯಲ್ಲಿರುವ ಕುಡಿಯುವ ನೀರಿನ ಬೋರ್ವೆಲ್ ಮೇಲೆ ಕಿಡಿಗೆಡಿಗಳು ರಾತ್ರಿ ವೇಳೆ ಮಣ್ಣು ಸುರಿದು ಹೋಗಿದ್ದಾರೆ. ಇದರಿಂದಾಗಿ ಬೋರ್ವೆಲ್ ಪೈಪ್ ಮುರಿದು ಹೋಗಿದೆ.
`ಚರಂಡಿ ಮೇಲೂ ಮಣ್ಣು ತುಂಬಿಕೊಂಡಿದೆ. ಇದರಿಂದಾಗಿ ಚರಂಡಿಯಲ್ಲಿನ ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ರಸ್ತೆ ಕೂಡ ಮಣ್ಣುಮಯವಾಗಿದೆ. ಇದರಿಂದಾಗಿ ರಸ್ತೆಯಲ್ಲಿ ಸಾರ್ವಜನಿಕರು ನೆಮ್ಮದಿಯಿಂದ ಓಡಾಡದಂತಾಗಿದೆ' ಸ್ಥಳೀಯ ನಿವಾಸಿ ಸುಬ್ರಹ್ಮಣಿ ಅಳಲು ತೊಡಿಕೊಂಡರು.
`ರಸ್ತೆಗೆ ಹಾಗೂ ಬೋರ್ವೆಲ್ ಮೇಲೆ ಮಣ್ಣು ಸುರಿದಿರುವುದನ್ನು ತೆರವುಗೊಳಿಸುವಂತೆ ನಾಲ್ಕು ದಿನಗಳ ಹಿಂದೆಯೇ ವೈಟ್ಫೀಲ್ಡ್ ಬಿಬಿಎಂಪಿ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಒಂದು ವಾರ ಕಳೆದರೂ ಅಧಿಕಾರಿಗಳು ಮನವಿಗೆ ಸ್ಪಂದಿಸಿಲ್ಲ' ಎಂದು ಅವರು ದೂರಿದರು.