ನವದೆಹಲಿ (ಪಿಟಿಐ): ‘ಅಭ್ಯರ್ಥಿಗಳು ಮೇ 16ರಂದು ಮತ ಎಣಿಕೆ ಕೇಂದ್ರಕ್ಕೆ ತಮ್ಮೊಂದಿಗೆ ಒಬ್ಬರಿಗಿಂತ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಕರೆದುಕೊಂಡು ಬರುವಂತಿಲ್ಲ’ ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ.
‘ಎಸ್ಪಿಜಿ ಭದ್ರತೆ ಹೊಂದಿರುವ ಅಭ್ಯರ್ಥಿ ‘‘ಸಾದಾ ಉಡುಪಿನ’’ ಒಬ್ಬ ಭದ್ರತಾ ಸಿಬ್ಬಂದಿಯೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬರಬಹುದು. ಆದರೆ ಈತ ತನ್ನ ಬಳಿ ಇರುವ ಶಸ್ತ್ರಾಸ್ತ್ರ ಪ್ರದರ್ಶಿಸಬಾರದು’ ಎಂದೂ ಆಯೋಗ ಸೂಚಿಸಿದೆ.
ಯಾರು ಮತ ಎಣಿಕೆ ಏಜೆಂಟ್ ಆಗುವಂತಿಲ್ಲ?: ಸಚಿವರು, ಹಾಲಿ ಸಂಸದ ಅಥವಾ ಶಾಸಕ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಸಹಕಾರ ಸಂಸ್ಥೆಗಳ ಅಧ್ಯಕ್ಷರನ್ನು ಮತ ಎಣಿಕೆ ಏಜೆಂಟರನ್ನಾಗಿ ನೇಮಕಮಾಡಿಕೊಳ್ಳುವಂತಿಲ್ಲ. ಸ್ಥಳೀಯ ವ್ಯಕ್ತಿಗಳನ್ನು ಮತ ಎಣಿಕೆ ಏಜೆಂಟರನ್ನಾಗಿ ನೇಮಿಸಿಕೊಳ್ಳಬೇಕೆಂದೇನೂ ಇಲ್ಲ. ಅಭ್ಯರ್ಥಿಗಳು 18 ವರ್ಷ ದಾಟಿದ ಯಾರನ್ನು ಬೇಕಾದರೂ ಮತ ಎಣಿಕೆ ಏಜೆಂಟರನ್ನಾಗಿ ನೇಮಕ ಮಾಡಿಕೊಳ್ಳಬಹುದು. ಭದ್ರತೆ ಹೊಂದಿರುವ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರ ಪ್ರವೇಶಿಸುವುದಕ್ಕೆ ಮುನ್ನ ಸ್ವ ಇಚ್ಛೆಯಿಂದ ಭದ್ರತೆ ಬಿಟ್ಟುಕೊಡುವುದಾಗಿ ಘೋಷಿಸಬೇಕಾಗುತ್ತದೆ ಎಂದೂ ಆಯೋಗ ಹೇಳಿದೆ.