ಹಾವೇರಿ: `ಜಾನಪದ ಅಕಾಡೆಮಿ ಅಧ್ಯಕ್ಷನಾಗಿ ನನ್ನ ಅವಧಿ ಪೂರ್ಣಗೊಂಡಿದೆ. ಇನ್ನೊಂದು ಅವಧಿಗೆ ಅಧ್ಯಕ್ಷನಾಗಿ ನಾನು ಮುಂದುವರಿಯುವುದಿಲ್ಲ~ ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಅವಧಿ ಪೂರ್ಣವಾದ ಬಳಿಕವೂ ಸರ್ಕಾರದ ಮನವಿ ಮೇರೆಗೆ ಇಲ್ಲಿಯವರೆಗೆ ಕಾರ್ಯ ನಿರ್ವಹಿಸಿರುವೆ. ಇನ್ನೊಂದು ಅವಧಿಗೆ ಅಧ್ಯಕ್ಷನಾಗಿ ಮುಂದುವರಿಯಲು ಸರ್ಕಾರ ಕೇಳಿಕೊಂಡಿದೆ. ಆದರೆ ಬೇರೆಯವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸರ್ಕಾರದ ಮನವಿಯನ್ನು ನಿರಾಕರಿಸಿದ್ದೇನೆ~ ಎಂದರು.
ಜಿಲೆಯ್ಲ ಶಿಗ್ಗಾವಿಯಲ್ಲಿ ಸ್ಥಾಪನೆಯಾದ ದೇಶದ ಏಕೈಕ ಜಾನಪದ ವಿಶ್ವವಿದ್ಯಾಲಯ ಉದ್ಘಾಟನೆಯಾಗದಿರುವ ಬಗ್ಗೆ ಪ್ರಸ್ತಾಪಿಸಿದ ಅವರು, `ವಿಶ್ವವಿದ್ಯಾಲಯ ಉದ್ಘಾಟನೆಯಾಗದಿದ್ದರೂ ತನ್ನ ಕಾರ್ಯ ಚಟುವಟಕೆಗಳನ್ನು ಆರಂಭಿಸಿದೆ.
ಉದ್ಘಾಟನೆ ಎಂಬುದು ಕೇವಲ ಒಂದು ಪ್ರಕ್ರಿಯೆಯಾಗಿದ್ದು, ಅದು ಆಗಲಿಲ್ಲ ಎಂದ ಮಾತ್ರಕ್ಕೆ ಇಡೀ ವಿಶ್ವವಿದ್ಯಾಲಯ ಕಾರ್ಯ ಆರಂಭಿಸಿಲ್ಲ ಎಂದಲ್ಲ. 30,000 ಹಳ್ಳಿಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಬರುವ ಜೂನ್ನಿಂದ ತರಗತಿ ಪ್ರಾರಂಭಿಸಲು ಪಠ್ಯಕ್ರಮ ಸಹ ಸಿದ್ಧಗೊಳ್ಳುತ್ತಿದೆ~ ಎಂದು ತಿಳಿಸಿದರು.