ನವದೆಹಲಿ (ಪಿಟಿಐ): ರಾಜ್ಯದಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರುವ ಇಂಗಿತವನ್ನು ಗುರುವಾರ ವ್ಯಕ್ತಪಡಿಸಿದೆ.
ಕಬ್ಬಿಣ ಹಾಗೂ ಉಕ್ಕಿನ ಉತ್ಪಾದನೆಯಲ್ಲಿ ಆಗುತ್ತಿರುವ ತೀವ್ರತರ ಕುಸಿತವನ್ನು ಪರಿಗಣಿಸಿರುವ ಅಫ್ತಬ್ ಆಲಂ ಹಾಗೂ ಕೆ.ಎಸ್. ರಾಧಾಕೃಷ್ಣನ್ ಅವರಿದ್ದ ನ್ಯಾಯಪೀಠ ಕೈಗಾರಿಕಾ ವಲಯ ಮುಚ್ಚಲು ಬಿಡಬಾರದು. ಅದಕ್ಕಾಗಿ ರಾಜ್ಯದಲ್ಲಿ ಗಣಿಗಾರಿಕೆಯನ್ನು ಮತ್ತೆ ಆರಂಭಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದೆ.
ಕರ್ನಾಟಕ ರಾಜ್ಯ ಕಬ್ಬಿಣ ಮತ್ತುಉಕ್ಕು ತಯಾರಿಕಾ ಸಂಘವು ರಾಜ್ಯದಲ್ಲಿ ಸ್ಥಗಿತಗೊಂಡಿರುವ 16 ಗಣಿಗಾರಿಕಾ ಕಂಪೆನಿಗಳನ್ನು ಆರಂಭಿಸಲು ತಕ್ಷಣವೇ ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಪೀಠ ಈ ರೀತಿ ಅಭಿಪ್ರಾಯಪಟ್ಟಿತು.
ಸುಪ್ರೀಂಕೋರ್ಟ್ ನೇಮಿಸಿರುವ ಕೇಂದ್ರಿಯ ಉನ್ನತಾಧಿಕಾರ ಸಮಿತಿ(ಸಿವಿಸಿ)ಯ ವಿಚಾರಣೆಯಲ್ಲಿ ಈ 16 ಗಣಿ ಕಂಪೆನಿಗಳಲ್ಲಿ ಅತ್ಯಂತ ಕಡಿಮೆ ಅಕ್ರಮ ನಡೆದಿದೆ ಎಂದು ಕಂಡುಬಂದಿದೆ. ಹಾಗಾಗಿ ಗಣಿಗಾರಿಕೆ ನಡೆಸಲು ಅನುಮತಿ ನೀಡಬೇಕೆಂದು ಸಂಘವು ಅರ್ಜಿಯಲ್ಲಿ ಕೋರಿದೆ.
ಆದರೆ ಈ ಸಂಬಂಧ ಅಂತಿಮ ತೀರ್ಪನ್ನು ಸಿವಿಸಿ ವರದಿ ಸಲ್ಲಿಸಿದ ನಂತರ ಅಂದರೆ ಆಗಸ್ಟ್ 17ರಂದು ನೀಡುವುದಾಗಿ ನ್ಯಾಯಪೀಠ ತಿಳಿಸಿತು.