ಉಡುಪಿ: ಭಾರತ ಕಬಡ್ಡಿ ತಂಡದ ನಾಯಕಿಯಾಗಿದ್ದ ಮಮತಾ ಪೂಜಾರಿಯವರು ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಾವರದ ಸಾಫ್ಟ್ವೇರ್ ಎಂಜಿನಿಯರ್ ಅಭಿಷೇಕ್ ಅವರನ್ನು ಬುಧವಾರ ಇಲ್ಲಿ ಮದುವೆಯಾದರು.
ಈ ವಿವಾಹ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಶಾಸಕ ಗೋಪಾಲ ಭಂಡಾರಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ `ಮುಂದಿನ ದಿನಗಳಲ್ಲಿ ಆಡುವುದನ್ನು ಮುಂದುವರಿಸುವುದೇ, ಬೇಡವೇ ಎಂಬ ಬಗ್ಗೆ ಕೆಲವು ದಿನಗಳ ನಂತರ ತೀರ್ಮಾನಿಸುತ್ತೇನೆ. ಸಧ್ಯಕ್ಕಂತೂ ಯಾವುದೇ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಿಲ್ಲ' ಎಂದರು.
ಅಭಿಷೇಕ್ ಮಾತನಾಡಿ `ನಾನು ಆಕೆಯ ಸಾಧನೆಯನ್ನು ನೋಡಿ ಮದುವೆಯಾಗಿರುವುದಲ್ಲ. ಆಕೆಯ ಸರಳ ನಡೆನುಡಿಗಾಗಿ ಆಕೆಯನ್ನು ನಾನು ಇಷ್ಟ ಪಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಕಬಡ್ಡಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದು, ಬಿಡುವುದು ಆಕೆಗೆ ಸಂಬಂಧಿಸಿದ ವಿಷಯ' ಎಂದರು.