ಮರುಳುಗಾಡಿನ ಹಣ್ಣೊಂದನ್ನು ಮಲೆನಾಡಿನಲ್ಲಿ ಬೆಳೆಯಬಹುದು ಎಂಬುದನ್ನು ತಾಲ್ಲೂಕಿನ ಹರಂದೂರಿನ ವಸಂತ್ಕುಮಾರ್ ಹರ್ಡಿಕರ್ ತೋರಿಸಿಕೊಟ್ಟಿದ್ದಾರೆ.ಇರಾನ್, ಅಪಘಾನಿಸ್ಥಾನ, ಅರಬ್ದೇಶಗಳಲ್ಲಿ ಹೇರಳವಾಗಿ ಬೆಳೆಯುವ ಅಂಜೂರ ಇವರ ಮನೆ ಅಂಗಳದಲ್ಲಿ ಬೆಳೆದು ನಿಂತು ಫಲ ನೀಡಿದೆ. ಮಾದಕ ಪರಿಮಳ ಬೀರುವ ಗಂಟೆಯಾಕರದ ಹಣ್ಣುಗಳ ಗೊಂಚಲು ಎರಡು ವರ್ಷದ ಅಂಜೂರ ಗಿಡದಲ್ಲಿ ಕಾಣಿಸಿಕೊಂಡಿದೆ.
ಆಂಗ್ಲಭಾಷೆಯಲ್ಲಿ ಫಿಗ್, ಸಂಸ್ಕೃತದಲ್ಲಿ ಮಂಜುಲ, ಹಿಂದಿಯಲ್ಲಿ ಅಂಜೀರ್ ಎಂದು ಕರೆಯುವ ಈ ಹಣ್ಣಿನ ಸಸ್ಯಶಾಸ್ತ್ರೀಯ ಹೆಸರು ಪೈಕಸ್ಕ್ಸಾರಿಕ. ವರ್ಷದಲ್ಲಿ ಎರಡು ಬಾರಿ ಹಣ್ಣು ಬಿಡುವ ಅಂಜೂರ ಪರಾಗ ಸ್ಪರ್ಶವಿಲ್ಲದೆ, ಹೂವಿಲ್ಲದೆ ಹಣ್ಣಾಗುವ ವಿಶಿಷ್ಟ ಸಸ್ಯ.
ಸಿಹಿಮಿಶ್ರಿತ ಹುಳಿಯ ಹಣ್ಣು ಸವಿಯಲು ಸೊಗಸು, ಒಣಗಿಸಿದ ಸಂಸ್ಕರಿಸಿದ ಹಣ್ಣು ಹಾಗೂ ಅದರ ಪುಡಿಗೆ ಬಹು ಬೇಡಿಕೆಯಿದೆ. ಜಾ,ಮ್, ಉಪ್ಪಿನಕಾಯಿ, ಕೇಕ್, ಪೇಸ್ಟ್ಗಳಲ್ಲಿ ಬಳಕೆ ಮಾಡುವ ಈ ಹಣ್ಣು ಡ್ರೈಫ್ರೂಟ್ ಆಗಿ ಜನಪ್ರಿಯ.ಟಿಪ್ಪುಸುಲ್ತಾನನ ಅತ್ಯಂತ ಪ್ರೀತಿಯ ಹಣ್ಣು ಎಂಬ ಹೆಗ್ಗಳಿಕೆ ಹೊಂದಿರುವ ಈ ಹಣ್ಣು ರಾಜ್ಯದ ಶ್ರೀರಂಗಪಟ್ಟಣದ ಗಂಜಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.
ಅಂಜೂರ ಶರ್ಕರ ಪಿಷ್ಟ ,ಸಸಾರ ಜನಕ, ನರು ,ರಂಜಕ, ಸುಣ್ಣಹಗೂ ಎ ಜೀವಸತ್ವ ಒಳಗೊಂಡಿದ್ದು ದೇಹದ ತೂಕ ಹೆಚ್ಚಳಕ್ಕೆ, ಸಿಡುಬು ಮತ್ತು ಚರ್ಮ ರೋಗ ನಿವಾರಣೆಗೆ, ದೇಹ ತಂಪಾಗಿಸಲು, ರಕ್ತ ಪುಷ್ಠಿಗೆ, ರಕ್ತಸ್ರಾವ ತಡೆ ಹಾಗೂ ಮೂತ್ರ ಬದ್ದತೆಗೆ ಔಷ ಧೀಯಾಗಿ ಅಂಜೂರ ಬಳಕೆಯಾಗುತ್ತಿದೆ.
ತಟ್ಟೆಯಗಲದ ದೊಡ್ಡಗಾತ್ರದ ಎಲೆಗಳನ್ನು ಒಳಗೊಂಡ ಅಂಜೂರದ ಗಿಡ 8 ರಿಂದ 10 ಅಡಿ ಎತ್ತರ ಬೆಳೆಯುವುದಲ್ಲದೆ ಮಾರ್ಚ್, ಮೇ, ಜುಲೈ, ಸೆಪ್ಟಂಬರ್ ತಿಂಗಳಲ್ಲಿ ಹಣ್ಣು ನೀಡುತ್ತದೆ. ಮರಳು ಮಿಶ್ರಿತ, ನೀರು ಬಸಿದು ಹೋಗುವ ಮಣ್ಣಿನಲ್ಲಿ ಬಿಸಿಲ ಜಾಗದಲ್ಲಿ ಅಂಜೂರ ಬೆಳೆಯಬಹುದಾಗಿದೆ ಎಂದು ಪ್ರಗತಿಪರ ಕೃಷಿಕ ವಸಂತಕುಮಾರ್ ಹರ್ಡಿಕರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ : 944950555 ಸಂಪರ್ಕಿಸಬಹುದು.