ಹನುಮಸಾಗರ: `ಕಾರ ಹುಣ್ಣಿಮೆಗೆ ಕಡೆ ಕೂರಿಗೆ ಮಣ್ಣೆತ್ತುಗಳು ಮಳೆ ತಂದವು' ಎಂಬುದು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವ ಒಂದು ನಾಣ್ನುಡಿಯಾಗಿದೆ. ಕಳೆದ ವರ್ಷದಿಂದ ಮಳೆಯಾಗದೆ ಇದ್ದರೂ ರೈತರು ಮಾತ್ರ ಮಣ್ಣೆತ್ತುಗಳು ಮಳೆ ತರುತ್ತವೆ ಎಂಬ ನಂಬಿಕೆಯಿಂದ ಸೋಮವಾರ ಸಂಭ್ರಮದಿಂದ ಮಣ್ಣೆತ್ತುಗಳ ಪೂಜೆ ನೆರವೇರಿಸಿದರು.
ಈ ಹಬ್ಬದ ಮೂಲಕ ಹೊಲದಲ್ಲಿ ದುಡಿಯುವ ಎತ್ತುಗಳಿಗೆ ಹಾಗೂ ಹೊಲದ ಮಣ್ಣಿನಿಂದಲೇ ಮಾಡಿದ ಮಣ್ಣೆತ್ತುಗಳಿಗೂ ಪೂಜೆ, ನೈವೇದ್ಯ, ಗೌರವ ಸಂದಾಯವಾಯಿತು.
ಬಯಲು ಸೀಮೆಯ ಮಣ್ಣಿನ ಸೊಗಡು, ಆಚರಿಸುವ ಹಬ್ಬಗಳ ಮಹತ್ವ, ರೈತರಿಗೆ ದನಗಳ ಮೇಲಿರುವ ಮಮಕಾರ ಇವು ಬಯಲು ಸೀಮೆಯ ಸೊಗಡಿನ ಅಭಿವ್ಯಕ್ತಿಯ ಮೊತ್ತದಂತಾಗಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ನಡೆಯಿತು.
ಜೇಷ್ಠ ಮಾಸದಲ್ಲಿನ ಕೊನೆಯ ಹಬ್ಬ, ಭೂಮಿತಾಯಿಯ ಚೊಚ್ಚಲ ಮಗನಂತಿರುವ ಎತ್ತುಗಳು ಹಾಗೂ ರೈತನ ನಡುವಣ ನಂಟು ಸಾರುವ ಹಬ್ಬ ಇದಾಗಿದೆ ಎಂದು ಹೇಳಬಹುದು.
ಇಲ್ಲಿಯವರೆಗೆ ಬೆವರು ಹರಿಸಿದ ಎತ್ತುಗಳು ಹಬ್ಬದ್ಲ್ಲಲಿ ರೈತನಿಂದ ಪೂಜೆ ಮಾಡಿಸಿಕೊಳ್ಳುತ್ತವೆ. ಪೂಜೆ ಹಾಗೂ ನೈವೇದ್ಯ ನಿಜವಾದ ಎತ್ತುಗಳಿಗೆ ಮಾತ್ರವಲ್ಲದೆ ಮಣ್ಣೆತ್ತುಗಳಿಗೂ ಸಲ್ಲುವುದು ವಿಶೇಷ ಎಂದು ರೈತ ಬಸಲಿಂಗಪ್ಪ ಹೇಳಿದರು.