ಕೃಷ್ಣರಾಜಪುರ: ಮಳೆಯಿಂದ ವಾರ್ಡ್ 26ರ ವ್ಯಾಪ್ತಿ ಅಂಬೇಡ್ಕರ್ನಗರ ಸರ್ಕಾರಿ ಶಾಲೆಯ ಆರು ಕೊಠಡಿಗಳಿಗೆ ನೀರು ನುಗ್ಗಿದೆ. ವಾರದಿಂದ ಆಟದ ಮೈದಾನದಲ್ಲಿ ನೀರು ನಿಂತಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಶಾಲೆಯ ಆವರಣದಲ್ಲಿ ಅವ್ಯವಸ್ಥೆ ಸೃಷ್ಟಿಯಾಗುತ್ತದೆ. ಮೈದಾನದಲ್ಲಿ ನಿಂತ ನೀರು ಒಂದು ವಾರ ಇರುತ್ತದೆ. ಇದರಿಂದ ಕೆಟ್ಟ ವಾಸನೆಯಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ. ಶಾಲಾ ಕೊಠಡಿಗಳಲ್ಲೂ ಮತ್ತು ಶಿಕ್ಷಕರ ಕೊಠಡಿಗಳಲ್ಲೂ ಮಳೆ ನೀರು ನಿಂತು ಪಾಠ ಪ್ರವಚನಗಳು ಮತ್ತು ಪಠ್ಯೇತರ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದು ಸ್ಥಳೀಯ ನಿವಾಸಿ ಎಂ. ರಾಮರಾವ್ ದೂರಿದರು.
ಈಗ ಪ್ರೌಢಶಾಲೆ ತರಗತಿಗಳ ಕೊಠಡಿ ಎದುರು ಪಾಠ ಮಾಡಬೇಕಿದೆ. ಶಾಲೆಯಲ್ಲಿ ಕೊಠಡಿಗಳ ಕೊರತೆ ಇದೆ. ಇರುವ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ.ಮಳೆ ನೀರು ಸಂಗ್ರಹಗೊಂಡು ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. 500ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂಲಸೌಕರ್ಯದ ಕೊರತೆ ಇದೆ’ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.
ಮಳೆ ನೀರು ಮನೆಗೆ: ಮಳೆಯಿಂದಾಗಿ ಪೈ ಬಡಾವಣೆ ಮತ್ತು ಅಂಬೇಡ್ಕರ್ ಬಡಾವಣೆಗಳ ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಎರಡು ಕಡೆ ಗೋಡೆ ಕುಸಿದಿದೆ.