ಹೈದರಾಬಾದ್ (ಪಿಟಿಐ):ಆಂಧ್ರ ವಿಧಾನಸಭೆಯ ಬಹುತೇಕ ಎಲ್ಲ ಸದಸ್ಯರು ಆಂಧ್ರ ಪ್ರದೇಶ ಪುನರ್ರಚನೆ ಮಸೂದೆಯ ಚರ್ಚೆ ಸಂದರ್ಭದಲ್ಲಿ ಮಸೂದೆಗೆ ನೂರಕ್ಕೂ ಹೆಚ್ಚು ತಿದ್ದುಪಡಿಗಳನ್ನು ಸೂಚಿಸಿದ್ದಾರೆ.
ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ, ಪ್ರತಿಪಕ್ಷ ನಾಯಕ ಚಂದ್ರಬಾಬು ನಾಯ್ಡು ಮತ್ತು ಆಂಧ್ರ ಕಾಂಗ್ರೆಸ್ ಅಧ್ಯಕ್ಷ ಬೋತ್ಸ ಸತ್ಯನಾರಾಯಣ ಹೊರತುಪಡಿಸಿ ಬಹುತೇಕ ಇತರ ಎಲ್ಲರೂ ಮಸೂದೆಯ ಪ್ರತಿಯೊಂದು ಕಲಂಗೂ ತಿದ್ದುಪಡಿ ಸೂಚಿಸಿದ್ದಾರೆ. ಆಂಧ್ರ ಪ್ರದೇಶ ಪುನರ್ರಚನೆ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ಮೊದಲನೇ ಕಲಮನ್ನೇ ರದ್ದುಪಡಿಸಿ ಎಂದು ಸೀಮಾಂಧ್ರ ಶಾಸಕರು ಒತ್ತಾಯಿಸಿದ್ದಾರೆ.
ತೆಲಂಗಾಣ ಭಾಗದ ಶಾಸಕರು ಇದು ಕೇವಲ ಅಭಿಪ್ರಾಯ ಎಂದು ಹೇಳಿದರೆ, ಇದನ್ನು ತಿದ್ದುಪಡಿ ಎಂದೇ ಪರಿಗಣಿಸಬೇಕು ಎಂದು ಸೀಮಾಂಧ್ರ ಪ್ರದೇಶದ ಶಾಸಕರು ಪಟ್ಟು ಹಿಡಿದರು. ತೆಲಂಗಾಣ ಭಾಗದ ಶಾಸಕರು ತಮಗೆ ಪಥ್ಯವಾಗದ ಕಲಂಗಳಿಗೆ ತಿದ್ದುಪಡಿ ಸೂಚಿಸಿದರು. ಅಧಿವೇಶನವನ್ನು ಜನವರಿ 17ರ ವರೆಗೆ ಮುಂದೂಡಲಾಗಿದೆ.