ಬೆಂಗಳೂರು: ಮಹಿಳೆಯರ ಹಿತ ಕಾಪಾಡಬೇಕಿದ್ದ ಮಹಿಳಾ ಆಯೋಗ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ನಗರದ ಹಲಸೂರು ಗೇಟ್ ಪೊಲೀಸ್ ಠಾಣೆ ಎದುರು ಶನಿವಾರ ಧರಣಿ ನಡೆಸಿದರು.
ಸಂಘಟನೆಯ ಅಧ್ಯಕ್ಷೆ ಸುಬ್ಬಲಕ್ಷ್ಮಮ್ಮ ಮಾತನಾಡಿ `ಒಂಟಿ ಮಹಿಳೆ ಕೊಲೆ, ಅತ್ಯಾಚಾರ ಸೇರಿದಂತೆ ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಮಂಡ್ಯದ ಅಂಬಲವಾಡಿಯಲ್ಲಿ ಮರ್ಯಾದೆಯ ಹೆಸರಿನಲ್ಲಿ ಯುವತಿಯ ಕಗ್ಗೊಲೆ ನಡೆದಿದೆ.
ಅವಳನ್ನು ಪ್ರೀತಿಸಿದ ದಲಿತ ಯುವಕ ಭಯಭೀತನಾಗಿ ತಲೆಮರೆಸಿಕೊಂಡಿರುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರು ತನಗೆ ಸಂಬಂಧವಿಲ್ಲ ಎಂಬಂತೆ ಮಹಿಳಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ~ ಎಂದು ಆರೋಪಿಸಿದರು.
ಹೆಣ್ಣು ಭ್ರೂಣ ಹತ್ಯೆಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಈ ರೀತಿಯಾದರು ರಾಜ್ಯದ ಜನಸಂಖ್ಯೆ ಕಡಿಮೆ ಮಾಡಬೇಕು ಎಂದು ಆಯೋಗ ಸುಮ್ಮನಿರುವಂತೆ ಕಾಣುತ್ತಿದೆ. ಅಲ್ಲದೇ ಅಶಕ್ತ, ವೃದ್ದ ಹಾಗೂ ವಿಧವಾ ಮಹಿಳೆಯರಿಗೆ 11 ತಿಂಗಳಿನಿಂದ ಮಾಶಾಸನ ದೊರೆಯುತ್ತಿಲ್ಲ. ಆಯೋಗಕ್ಕೆ ಈ ಬಗ್ಗೆ ಎಚ್ಚರವಿದೆಯೇ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವರು ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ ಘಟನೆ ಮಹಿಳೆಯರ ಭಾವನೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಆದರೆ ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಳಾ ಆಯೋಗವೂ ಇದಕ್ಕೆ ಮೌನ ತಾಳಿದೆ ಎಂದು ಆರೋಪಿಸಿದರು.
ಕಾಣೆಯಾಗಿರುವ ಮಹಿಳಾ ಆಯೋಗವನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡುತ್ತೇವೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಸಂಘಟನೆಯ ಕಾರ್ಯದರ್ಶಿ ವಿ.ಎನ್.ಯಶೋಧ ಸೇರಿದಂತೆ ಹಲವರು ಧರಣಿಯಲ್ಲಿ ಭಾಗವಹಿಸಿದ್ದರು.