ಚಿಕ್ಕಬಳ್ಳಾಪುರ: ಮಹಿಳೆಯರನ್ನು ದೈವಿಸ್ವರೂಪಿ, ತಾಯಿಯೆಂದೇ ಪೂಜಿಸುವ ನಮ್ಮ ದೇಶದಲ್ಲೇ ಮಹಿಳೆಯರ ಮೇಲೆ ಹೆಚ್ಚಿನ ಹಿಂಸೆ, ದೌರ್ಜನ್ಯ ಜರುಗುತ್ತಿವೆ. ಮಹಿಳೆಯರನ್ನು ವಿಕೃತವಾಗಿ ಹಿಂಸಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸಿಪಿಎಂ ರಾಜ್ಯ ಘಟಕದ ಅಧ್ಯಕ್ಷ ಅಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಖಂಡಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಸೂಕ್ತ ರಕ್ಷಣೆಯಿಲ್ಲದೆ ಮಹಿಳೆಯರು ಭಯದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹೆಚ್ಚಾಗಲು ಮಹಿಳೆಯರೇ ಕಾರಣವೆಂದು ದೂಷಿಸಲಾಗುತ್ತದೆ. ಅವರ ವರ್ತನೆ ಮತ್ತು ತೊಡುವ ಬಟ್ಟೆಗಳಿಂದಲೇ ಸಂಕಷ್ಟಕ್ಕೆ ಸಿಲುಕುತ್ತಾರೆ. ಪುರುಷರು ಅತ್ಯಾಚಾರವೆಸಗುವಂತೆ ಪ್ರಚೋದಿಸುತ್ತಾರೆ ಎಂದು ಹೇಳಲಾಗುತ್ತದೆ. ಮಹಿಳೆಯರ ಮೇಲೆ ಅನಗತ್ಯ ಆರೋಪ ಹೊರಿಸಲಾಗುತ್ತದೆ.