ನವದೆಹಲಿ (ಐಎಎನ್ಎಸ್): ಮಹಿಳೆ ವಿರುದ್ಧದ ಪೊಲೀಸ್ ಹಿಂಸಾಚಾರದ ಇನ್ನೊಂದು ಘಟನೆ ಸಂಭವಿಸಿದರೆ ತಾನು ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಮತ್ತು ಇಂತಹ ಕೃತ್ಯದಲ್ಲಿ ಷಾಮೀಲಾದ ವ್ಯಕ್ತಿ ನ್ಯಾಯಾಲಯದ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಇಲ್ಲಿ ಎಚ್ಚರಿಕೆ ನೀಡಿತು.
ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಹೆಚ್ಚುತ್ತಿರುವ ಕ್ರೌರ್ಯದ ಘಟನೆಗಳ ಬಗ್ಗೆ ಪ್ರಸ್ತಾಪಿಸಿದ ನ್ಯಾಯಾಲಯ ಸಂವಿಧಾನ ನಿರ್ಮಾತೃಗಳು ಇಂತಹ ಘಟನೆಗಳ ಬಗ್ಗೆ ಹಾಗೂ ಅವುಗಳೊಂದಿಗೆ ವ್ಯವಹರಿಸಲು ಬೇಕಾದ ಅಗತ್ಯಗಳ ಬಗ್ಗೆ ಕಲ್ಪಿಸಿರಲಿಲ್ಲ ಎಂದು ನ್ಯಾಯಾಲಯ ಹೇಳಿತು.
ಇಂತಹ ಘಟನೆಗಳಲ್ಲಿ ಪೊಲೀಸ್ ಸಿಬ್ಬಂದಿ ಷಾಮೀಲಾದ ಪೊಲೀಸ್ ಸಿಬ್ಬಂದಿಗೆ ಸಂಬಂಧಿಸಿದಂತೆ ತಾನು ಮಿತಿಯನ್ನು ಮೀರಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಸಾರಿತು.
ದೆಹಲಿ, ಪಂಜಾಬ್, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮಹಿಳೆಯರನ್ನು ಥಳಿಸಿದ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ ಷಾಮೀಲಾದುದರತ್ತ ಬೊಟ್ಟು ಮಾಡಿದ ನ್ಯಾಯಾಲಯ 'ಇಂದೇನಾದರೂ ಮಹಾತ್ಮ ಗಾಂಧಿಯವರು ಹುಟ್ಟಿದ್ದಿದ್ದರೆ, ಅವರು ಹಲವಾರು ಬಾರಿ ಸಾಯುತ್ತಿದ್ದರು' ಎಂದು ನ್ಯಾಯಾಲಯ ಹೇಳಿತು.
ಮಹಿಳೆಯರ ವಿರುದ್ಧದ ಪೊಲೀಸ್ ಕ್ರೌರ್ಯದ ಬಗ್ಗೆ ಕಡುಸಂಕಟ ವ್ಯಕ್ತ ಪಡಿಸಿದ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ನೇತೃತ್ವದ ಪೀಠವು ಪೊಲೀಸ್ ಸುಧಾರಣೆಗಳಿಗೆ ಸಂಬಂಧಿಸಿದಂತೆ 2006ರಲ್ಲಿ ನೀಡಿದ್ದ ತಾನು ನಿರ್ದೇಶನಗಳ ಪ್ರಕಾರ ರಾಜ್ಯ ಭದ್ರತಾ ಆಯೋಗ (ಎಸ್ ಎಸ್ ಸಿ) ರಚನೆ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ರಾಜಸ್ತಾನ, ಹರ್ಯಾಣ, ಉತ್ತರಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ ಮತ್ತು ಗೋವಾ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿತು.
ಪ್ರಮಾಣ ಪತ್ರದ ಜೊತೆಗೆ ಎಸ್ ಎಸ್ ಸಿ ನಡೆಸಿದ ಸಭೆಗಳ ಸಂಖ್ಯೆ ಮತ್ತು ಈ ಸಭೆಗಳ ಕಲಾಪ ವಿವರಗಳನ್ನೂ ಲಗತ್ತಿಸಬೇಕು ಎಂದು ಪೀಠವು ತಾಕೀತು ಮಾಡಿತು.
ಮುಂದಿನ ವಿಚಾರಣೆ ವೇಳೆಯಲ್ಲಿ, ಎಸ್ ಎಸ್ ಸಿ ಸಭೆಗಳ ಕಾರ್ಯ ನಿರ್ವಹಣೆ ಮೇಲೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಿಗಾ ಇಡುವ ಪ್ರಶ್ನೆಯನ್ನೂ ತಾನು ಪರಿಗಣಿಸುವುದಾಗಿ ನ್ಯಾಯಾಲಯ ಹೇಳಿತು. ಎಸ್ ಎಸ್ ಸಿಗಳ ಕಾರ್ಯ ನಿರ್ವಹಣೆಯ ಮೇಲೆ ಕಣ್ಣಿಡುವುದು ತನಗೆ ಕಷ್ಟಕರ ಎಂದೂ ಪೀಠ ಹೇಳಿತು.
2006ರ ತನ್ನ ನಿರ್ದೇಶನದ ನಂತರ ಪೊಲೀಸ್ ಸುಧಾರಣೆಗಾಗಿ ಕಾನೂನು ರೂಪಿಸಿದ ಎಲ್ಲಾ ರಾಜ್ಯಗಳಿಗೂ ಆ ಕಾನೂನಿನ ಪ್ರತಿಗಳನ್ನು ಕೋರ್ಟ್ ಸಹಾಯಕ ಹರೀಶ್ ಸಾಳ್ವೆ ಅವರಿಗೆ ಒದಗಿಸುವಂತೆ ನ್ಯಾಯಾಲಯ ಸೂಚಿಸಿತು.
ಮಗುವಿನ ಮೇಲೆ ನಡೆದ ಅತ್ಯಾಚಾರವನ್ನು ಪ್ರತಿಭಟಿಸುತ್ತಿದ್ದ ಮಹಿಳೆಯನ್ನು ಪೊಲೀಸ್ ಅಧಿಕಾರಿಯೊಬ್ಬ ಥಳಿಸಿದ ಘಟನೆಯಲ್ಲಿ ಷಾಮೀಲಾದ ಘಟನೆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆಯೂ ದೆಹಲಿ ಪೊಲೀಸ್ ಕಮೀಷನರ್ ಗೆ ನ್ಯಾಯಾಲಯವು ನಿರ್ದೇಶನ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.