ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಇಂಡೇನ್ ಗ್ಯಾಸ್ ವಿತರಕ ಸಿಬ್ಬಂದಿಗಳಾದ ನಾರಾಯಣಸ್ವಾಮಿ, ಪ್ರಕಾಶ್ ಮತ್ತು ಅಣ್ಣಯ್ಯಪ್ಪ ಅವರನ್ನು ಸ್ತ್ರೀಶಕ್ತಿ ಸಂಘಗಳು, ಗ್ರಾಹಕರು ಮತ್ತು ನಾಗರಿಕರು ಸಮುದಾಯ ಭವನದಲ್ಲಿ ದಿಗ್ಭಂಧನಕ್ಕೆ ಒಳಪಡಿಸಿದ ಘಟನೆ ಶುಕ್ರವಾರ ನಡೆದಿದೆ.
ಮೇಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು ಎರಡರಿಂದ ಮೂರು ಸಾವಿರ ಇಂಡೇನ್ ಅನಿಲ ಸಿಲಿಂಡರ್ ಗ್ರಾಹಕರಿದ್ದು ಸ್ಥಳೀಯ ವಿತರಕರು 50 ರಿಂದ 60 ರೂಪಾಯಿ ಹೆಚ್ಚು ಪಡೆಯುತ್ತಿದ್ದಾರೆ. ತಿಂಗಳಿಗೆ ಕೊಡಬೇಕಾದ ಸಿಲಿಂಡರನ್ನು ನಾಲ್ಕರಿಂದ ಐದು ತಿಂಗಳಿಗೆ ನೀಡುತ್ತಾರೆ. ಮಧ್ಯದಲ್ಲಿ ಬರುವ ಸಿಲಿಂಡರನ್ನು 600 ರಿಂದ 700 ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ.
ಇದರಿಂದ ಗ್ರಾಹಕರಿಗೆ ಅನಾನುಕೂಲವಾಗುತ್ತಿದೆ. ಅತಿ ಹೆಚ್ಚು ಸಿಲಿಂಡರುಗಳನ್ನು ಹೊಂದಿರುವ ನಮ್ಮ ಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಮುತ್ತಲಿನ ಗ್ರಾಮದ ಗ್ರಾಹಕರಿಗೆ ಸರಿಯಾಗಿ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮಧ್ಯಪ್ರವೇಶಿಸಿ ಗ್ರಾಹಕರ ಸಂಕಷ್ಟಗಳನ್ನು ಇಂಡೇನ್ ಗ್ಯಾಸ್ ವಿತರಕರಿಗೆ ವಿವರಿಸಿದರು. ‘ಇನ್ನು ಮುಂದೆ ಕಚೇರಿ ವತಿಯಿಂದ ನೇರವಾಗಿ ಸಿಲಿಂಡರ್ಗಳನ್ನು ಹೆಚ್ಚುವರಿ ಹಣ ಪಡೆಯದೇ ಸರಬರಾಜು ಮಾಡುತ್ತೇವೆ. ಮಂಗಳವಾರ, ಗುರುವಾರ ಮತ್ತು ಭಾನುವಾರ ಮೇಲೂರು ಗ್ರಾಮದಲ್ಲೇ ವಿತರಿಸುತ್ತೇವೆ.
ಬುಕ್ಕಿಂಗ್ ಮಾಡಿದ 25 ದಿನಗಳೊಳಗೆ ಸಿಲಿಂಡರ್ ನೀಡುತ್ತೇವೆ’ ಎಂದು ಮುಚ್ಚಳಿಕೆಯನ್ನು ಬರೆದುಕೊಟ್ಟ ನಂತರ ಸ್ತ್ರೀಶಕ್ತಿ ಸಂಘಗಳು, ಗ್ರಾಹಕರು ಮತ್ತು ನಾಗರೀಕರು ದಿಗ್ಭಂಧನಕ್ಕೆ ಒಳಪಡಿಸಿದ್ದವರನ್ನು ಬಿಡುಗಡೆ ಮಾಡಿದರು.