ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಕನ್ ವಿರುದ್ಧ ಕಲ್ಮಾಡಿ ಕಿಡಿ

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಲಂಡನ್ ಒಲಿಂಪಿಕ್ಸ್‌ಗೆ ತೆರಳುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ವಿರುದ್ಧ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಕ್ರೀಡಾ ಸಚಿವರು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ನಾನು ಐಒಎ ನಿಯೋಗದೊಂದಿಗೆ ಒಲಿಂಪಿಕ್ಸ್‌ಗೆ ತೆರಳುತ್ತಿಲ್ಲ. ನನ್ನ ಮೇಲಿನ ಯಾವುದೇ ಆರೋಪ ಸಾಬೀತಾಗಿಲ್ಲ. ಅವರೇಕೆ ನನ್ನನ್ನು ತಡೆಯುತ್ತಿದ್ದಾರೆ.

ಒಲಿಂಪಿಕ್ಸ್‌ಗೆ ತೆರಳುವ ನನ್ನ ನಿರ್ಧಾರಕ್ಕೆ ಬದ್ಧ~ ಎಂದು ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಕಲ್ಮಾಡಿ ತಿರುಗೇಟು ನೀಡಿದ್ದಾರೆ. `ಇದೊಂದು ದುರದೃಷ್ಟಕರ ಘಟನೆ. ಭಾರತದ ಕ್ರೀಡಾಪಟುಗಳ ಜೊತೆ ಕಲ್ಮಾಡಿ ತೆರಳದಂತೆ ತಡೆಯೊಡ್ಡಲು ಒಬ್ಬ ಕ್ರೀಡಾ ಸಚಿವನಾಗಿ ನಾನು ಪೂರ್ಣ ಪ್ರಮಾಣದ ಪ್ರಯತ್ನ ಹಾಕುತ್ತೇನೆ~ ಎಂದಿದ್ದರು ಮಾಕನ್.

`ಒಲಿಂಪಿಕ್ಸ್‌ಗೆ ತೆರಳಲು ನ್ಯಾಯಾಲಯವೇ ಅನುಮತಿ ನೀಡಿದೆ. ಆದರೆ ಮಾಕನ್ ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರ ಹೇಳಿಕೆ ಓದಿ ನನಗೆ ಆಘಾತವಾಯಿತು. ತೀರ್ಪಿಗೆ ವಿರುದ್ಧವಾದ ಹೇಳಿಕೆ ನೀಡುತ್ತಿದ್ದಾರೆ. ಅವರು ರಾಜೀನಾಮೆ ನೀಡಬೇಕು. ಈ ಸಂಬಂಧ ನಾನು ಪ್ರಧಾನಿ ಅವರಲ್ಲಿ ಮನವಿ ಮಾಡುತ್ತೇನೆ~ ಎಂದು ಕಲ್ಮಾಡಿ ಹೇಳಿದ್ದಾರೆ.

ನಿಯೋಗದಲ್ಲಿಲ್ಲ: ಕಲ್ಮಾಡಿ ಭಾರತ ತಂಡದ ನಿಯೋಗದ ಭಾಗವಾಗಿಲ್ಲ ಎಂದು ಭಾರತ ಒಲಿಂಪಿಕ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಹೇಳಿದ್ದಾರೆ.

ಪ್ರತಿಕ್ರಿಯಿಸುವುದಿಲ್ಲ: `ಕಲ್ಮಾಡಿ ವಿರುದ್ಧ ಸಿಬಿಐ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿದೆ. ಅಂತಹ ವ್ಯಕ್ತಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ~ ಎಂದು ಮಾಕನ್ ನುಡಿದಿದ್ದಾರೆ. ಈ ಮೊದಲು ನೀಡಿದ ಹೇಳಿಕೆಗೆ ತಾವು ಬದ್ಧರಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT