ನವದೆಹಲಿ (ಪಿಟಿಐ): `2ಜಿ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆಯಲ್ಲಿ ನನ್ನ ವಿರುದ್ಧ ಸುಳ್ಳು ಸಾಕ್ಷಿ ಹೇಳುವಂತೆ ನನ್ನ ಆಪ್ತ ಸಹಾಯಕರಾಗಿದ್ದ ಆಶೀರ್ವಾದಂ ಆಚಾರ್ಯ ಅವರ ಮೇಲೆ ಸಿಬಿಐ ಒತ್ತಡ ಹೇರಿದೆ~ ಎಂದು ದೂರಸಂಪರ್ಕ ಮಾಜಿ ಸಚಿವ ಎ.ರಾಜಾ ಸೋಮವಾರ ಕೋರ್ಟ್ ಮುಂದೆ ಆರೋಪಿಸಿದರು.
ಈ ಪ್ರಕರಣದ ಇತರ ಆರೋಪಿಗಳಿಗೂ ತಮಗೂ ಯಾವುದೇ ಸಂಬಂಧ ಹುಡುಕುವಲ್ಲಿ ತನಿಖಾ ತಂಡ ವಿಫಲವಾಗಿದೆ. ಹಾಗಾಗಿ ಸುಳ್ಳು ಸಾಕ್ಷಿ ಹೇಳುವಂತೆ ಆಚಾರ್ಯ ಅವರ ಮೇಲೆ ಒತ್ತಡ ಹಾಕುತ್ತಿದೆ ಎಂದು ಅವರು ದೂರಿದರು.
ಆದರೆ ರಾಜಾ ಅವರ ಹೇಳಿಕೆಯನ್ನು ಅಲ್ಲಗಳೆದಿರುವ ಆಶೀರ್ವಾದಂ, `ನಾನು ಸುಳ್ಳು ಸಾಕ್ಷಿ ಹೇಳಿದ್ದೇನೆ ಎಂದು ಆರೋಪ ಹೊರಿಸುವುದು ಸರಿಯಲ್ಲ~ ಎಂದು ಸಮರ್ಥಿಸಿಕೊಂಡಿದ್ದಾರೆ.
`ರಾಜಾ ನಿಮ್ಮನ್ನು ರಾಜಕೀಯ ಸೇರಲು ಬೆಂಬಲಿಸಿಲ್ಲ ಎನ್ನುವ ಕಾರಣಕ್ಕೆ ನೀವು ಈ ಪ್ರಕರಣದಲ್ಲಿ ಅವರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ್ದೀರಿ~ ಎಂದು ರಾಜಾ ಪರ ವಕೀಲ ಸುಶೀಲ್ ಕುಮಾರ್, ಪಾಟೀ ಸವಾಲಿನ ವೇಳೆ ಆಚಾರ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
`ಒತ್ತಡದ ಮೇಲೆ ನೀವು ಸಿಬಿಐ ಸಾಕ್ಷಿಯಾಗಿದ್ದೀರಿ ಮತ್ತು ನಿಮ್ಮನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗುತ್ತದೆ~ ಎಂದು ಕುಮಾರ್ ವಾದಿಸಿದರು. `ರಾಜಾ ಅವರ ಮೇಲಿನ ಅಸಮಾಧಾನದಿಂದ ನಾನು ಅವರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ್ದೇನೆ ಎನ್ನುವುದು ಖಂಡಿತವಾಗಿಯೂ ಸರಿಯಲ್ಲ~ ಎಂದು ಆಚಾರ್ಯ ಪ್ರತಿಕ್ರಿಯಿಸಿದರು.
ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗೆ ಸಂಬಂಧಿಸಿದಂತೆ ಪ್ರತಿವಾದಿ ಪರ ವಕೀಲರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆಚಾರ್ಯ, `2009ರ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಸಹಾಯ ಪಡೆಯುವುದಕ್ಕೆ ರಾಜಾ ಅವರನ್ನು ನಾನು ಸಂಪರ್ಕಿಸಿಲ್ಲ~ ಎಂದರು.
ಕಾಂಗ್ರೆಸ್ ಟಿಕೆಟ್ ಪಡೆಯಲು ರಾಜಾ ಸಹಾಯ ಮಾಡಿಲ್ಲ ಎನ್ನುವುದಕ್ಕೆ ತಾವು ಅವರನ್ನು ತೊರೆಯಲು ನಿರ್ಧರಿಸಿದ್ದಾಗಿ ಪ್ರತಿವಾದಿ ಪರ ವಕೀಲರು ಮಂಡಿಸಿದ ವಾದವನ್ನು ಆಚಾರ್ಯ ಸಾರಾಸಗಟಾಗಿ ತಳ್ಳಿಹಾಕಿದರು.
`2ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ 2009ರಲ್ಲಿ ನಾನು ಸಿಬಿಐ ಮೂಲವಾದೆ ಎನ್ನುವುದು ಸುಳ್ಳು ಹೇಳಿಕೆ. ಈ ಪ್ರಕರಣದಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿದ್ದೂ ನನಗೆ ಗೊತ್ತಿರಲಿಲ್ಲ. ಎಫ್ಐಆರ್ ದಾಖಲಿಸಿದ ದಿನದಿಂದ ನನ್ನನ್ನು ಸಿಬಿಐ ಪ್ರಶ್ನೆಗೊಳಪಡಿಸುತ್ತಿದೆ. ಇದಕ್ಕೂ ಮುನ್ನ ನಾನು ಸಿಬಿಐ ಜತೆ ಸಂಪರ್ಕ ಇಟ್ಟುಕೊಂಡಿರಲಿಲ್ಲ~ ಎಂದು ಹೇಳಿದರು. ಆಚಾರ್ಯ ವಿಚಾರಣೆ ಮಂಗಳವಾರ ಕೂಡ ಮುಂದುವರಿಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.