ಬಾಗಲಕೋಟೆ: ಮಾರ್ಚ್ ಎರಡನೇ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ಬೀಳಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಬಜೆಟ್ನಲ್ಲಿ ನೀರಾವರಿ ಮತ್ತು ಕೃಷಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯನ್ನು ಹಂತಹಂತವಾಗಿ ಆರೇಳು ವರ್ಷದಲ್ಲಿ ಪೂರ್ಣ ಗೊಳಿಸಲಾಗುವುದು. ಯೋಜನೆ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದ ಅವರು, ಕೃಷ್ಣಾ ನ್ಯಾಯಮಂಡಳಿ ತೀರ್ಪಿಗೆ ಭಂಗ ಬಾರದಂತೆ ಯೋಜನೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಾದು ಕುಳಿತ ಸಿ.ಎಂ: ಬೀಳಗಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಆಗಮಿಸಿದ್ದ ಸದಾನಂದಗೌಡರು, ಯಡಿಯೂರಪ್ಪ ಅವರ ಆಗಮನಕ್ಕಾಗಿ ಒಂದು ಗಂಟೆ ನಿರಾಣಿ ಕಾಲೇಜಿನಲ್ಲಿ ಕಾದು ಕುಳಿತ ಪ್ರಸಂಗ ನಡೆಯಿತು.
ಅಲ್ಲದೇ ಮುಖ್ಯಮಂತ್ರಿ ಸ್ವಾಗತಕ್ಕೆ ಜಿಲ್ಲೆಯ ಇಬ್ಬರು ಸಚಿವರೂ ಗೈರು ಹಾಜರಾಗಿದ್ದರು. ಒಂದು ಗಂಟೆ ತಡವಾಗಿ ಬಂದ ಯಡಿಯೂರಪ್ಪ ಅವರೊಂದಿಗೆ ಸಚಿವರಾದ ಗೋವಿಂದ ಕಾರಜೋಳ ಮತ್ತು ಮುರುಗೇಶ ನಿರಾಣಿ ಆಗಮಿಸಿದರು.
ಯಡಿಯೂರಪ್ಪ ವ್ಯಂಗ್ಯ:`ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು~ ಎಂಬ ಬಿ.ಬಿ. ಶಿವಪ್ಪ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, `ಶಿವಪ್ಪ ಒಳ್ಳೆಯ ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಶೀಘ್ರವಾಗಿ ಪರಿಶೀಲಿಸಲಿ~ ಎಂದು ವ್ಯಂಗ್ಯವಾಡಿದರು.