ಶಿವಮೊಗ್ಗ: ಪಶು ವೈದ್ಯಕೀಯ ಶಿಕ್ಷಣ ಕಾಲೇಜಿಗೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಇದೇ ಫೆ. 21ರಿಂದ ಪಶು ವೈದ್ಯಕೀಯ ತರಬೇತಿ ತರಗತಿಗಳು ಆರಂಭವಾಗಿವೆ. ಭಾರತೀಯ ಪಶು ವೈದ್ಯಕೀಯ ಮಂಡಳಿ ಪ್ರಕಾರ ತರಬೇತಿ ಪಡೆಯಲು ವ್ಯಾಸಂಗ ಮಾಡುತ್ತಿರುವ ಕಾಲೇಜು ತಾತ್ಕಾಲಿಕ ಮಾನ್ಯತೆ ಹೊಂದಿರುವುದು ಕಡ್ಡಾಯ. ಆದರೆ, ಪಶು ವೈದ್ಯಕೀಯ ಕಾಲೇಜಿಗೆ ಸರ್ಕಾರ ಇದುವರೆಗೂ ಮಾನ್ಯತೆ ನೀಡದಿದ್ದರಿಂದ ಭವಿಷ್ಯ ಅತಂತ್ರವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪಶು ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭವಾಗಿ ನಾಲ್ಕು ವರ್ಷಗಳಾದರೂ ಮಾನ್ಯತೆ ನೀಡದಿರುವುದು ಖಂಡನೀಯ. ಮಾನ್ಯತೆ ಸಿಗದೆ ಪ್ರಮಾಣಪತ್ರವೂ ದೊರೆಯುವುದಿಲ್ಲ. ಇದರಿಂದ ಕೊನೆ ಸೆಮಿಸ್ಟರ್ ವಿದ್ಯಾರ್ಥಿಗಳು ಈಗ ಕೋರ್ಸ್ ಮುಗಿಸಿಕೊಂಡು ಹೊರಬಂದರೂ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ, ನೂತನ ಕಾಲೇಜುಗಳನ್ನು ಆರಂಭಿಸಲು ಮುಂದಾಗುತ್ತಿದೆ. ಅಷ್ಟೇ ಅಲ್ಲ, ಭಾರತೀಯ ವೈದ್ಯ ಪರಿಷತ್ತು, ಅದಕ್ಕೆ ಅನುಮೋದನೆ ನೀಡಿ, ನೋಂದಣಿಗೆ ಸಹಕರಿಸುತ್ತಿದೆ. ಆದರೆ, ಈಗಿರುವ ಕಾಲೇಜಿಗೆ ಮಾನ್ಯತೆ ನೀಡಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.
ರಸ್ತೆ ಮಧ್ಯೆ ಕಲ್ಲುಗಳನ್ನು ಹಾಕಿ ಕಾಲೇಜು ಉಪನ್ಯಾಸಕರು ಮತ್ತು ಸಿಬ್ಬಂದಿಗೆ ಪ್ರವೇಶ ನಿರ್ಬಂಧಿಸಿದ ಘಟನೆಯೂ ನಡೆಯಿತು.