ಬೆಂಗಳೂರು: ಏರುತ್ತಿರುವ ಕಚ್ಚಾತೈಲ ಬೆಲೆಯ ಅಡ್ಡ ಪರಿಣಾಮಗಳನ್ನು ತಡೆಗಟ್ಟಲು ವಿಮಾನಗಳಲ್ಲಿ ಬಳಸುವ ಇಂಧನದ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರಗಳು ಕೂಡಲೇ ಇಳಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವ ವಯಲಾರ್ ರವಿ ಒತ್ತಾಯಿಸಿದರು.
`ನಮ್ಮ ಒಟ್ಟು ಅಗತ್ಯತೆಯ ಶೇಕಡ 21ರಷ್ಟು ಕಚ್ಚಾ ತೈಲವನ್ನು ಮಾತ್ರ ಆಂತರಿಕ ಮಾರುಕಟ್ಟೆಯಿಂದ ಪಡೆದುಕೊಳ್ಳಬಹುದು. ಇನ್ನುಳಿದ ಕಚ್ಚಾ ತೈಲಕ್ಕೆ ವಿದೇಶಿ ಮಾರುಕಟ್ಟೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಪ್ರತಿ ದಿನ ಏರಿಕೆಯಾಗುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಕುಸಿದಿದೆ. ಈ ಹಿನ್ನೆಲೆಯಲ್ಲಿ ಆಂತರಿಕ ಮಾರುಕಟ್ಟೆಯಲ್ಲೂ ತೈಲ ಬೆಲೆ ಏರಿಕೆ ಅನಿವಾರ್ಯವಾಗಿತ್ತು~ ಎಂದರು.
ಕೇರಳವೊಂದನ್ನು ಹೊರತುಪಡಿಸಿದರೆ ದೇಶದ ಯಾವುದೇ ರಾಜ್ಯ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆಯನ್ನು ಕಡಿತ ಮಾಡಿಲ್ಲ. ಬೇರೆ ರಾಜ್ಯಗಳೂ ಕೇರಳ ಮಾದರಿಯನ್ನೇ ಅನುಸರಿಸಿ ತೈಲ ಬೆಲೆ ಇಳಿಕೆಗೆ ಸಹಾಯ ಮಾಡಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಮಾತನಾಡಿ, `2020ರ ವೇಳೆಗೆ ಬೆಂಗಳೂರಿನ ವೈಮಾನಿಕ ಕ್ಷೇತ್ರಕ್ಕೆ 110 ಶತಕೋಟಿ ಡಾಲರ್ (ರೂ 4,95,000 ಕೋಟಿ) ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ಇದರಲ್ಲಿ 80 ಶತಕೋಟಿ ಡಾಲರ್ ಉತ್ಪಾದನಾ ಕ್ಷೇತ್ರದಲ್ಲಿ ಮತ್ತು 30 ಶತಕೋಟಿ ಡಾಲರ್ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಯಾಗಲಿದೆ~ ಎಂದರು.
ನಾಗರಿಕ ವಿಮಾನಯಾನ ಇಲಾಖೆಯ ಮಹಾನಿರ್ದೇಶಕ ಇ.ಕೆ. ಭರತ್ ಭೂಷಣ್ ಮತ್ತಿತರು ಇದ್ದರು.