ಮಂಡ್ಯ: ಪಾಂಡವಪುರ ತಾಲ್ಲೂಕು ಮೇಲುಕೋಟೆಯಲ್ಲಿ ಪ್ರಸಿದ್ಧ ಚಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಮಾರ್ಚ್ 15 ರಂದು ನಡೆಯಲಿದೆ.ಈ ಬಾರಿ ಉತ್ಸವವನ್ನು ಶ್ರೀರಂಗಪಟ್ಟಣದ ದಸರಾ ಉತ್ಸವ ಮಾದರಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಮೇಲುಕೋಟೆಯ ಪ್ರವಾಸಿ ಮಂದಿರದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಉತ್ಸವಕ್ಕಾಗಿ ಹೆಚ್ಚು ಅನುದಾನ ಬಿಡುಗಡೆಗೆ ಕೋರಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲು ಸಭೆ ತೀರ್ಮಾನಿಸಿತು.
ಉತ್ಸವವನ್ನು ಆಕರ್ಷಕಗೊಳಿಸಲು ಸಾಂಸ್ಕೃತಿಕ, ಧ್ವನಿ ಬೆಳಕು ಕಾರ್ಯಕ್ರಮ ಆಯೋಜಿಸುವುದು, ಭಕ್ತಾದಿಗಳಿಗೆ ನೆರವಾಗುವಂತೆ ಮೈಸೂರು, ಮಂಡ್ಯ, ಬೆಂಗಳೂರು ನಗರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳ ನಿಯೋಜನೆ ಕುರಿತು ಸಭೆಯು ಚರ್ಚಿಸಿತು.
ಅಲ್ಲದೆ, ಭಕ್ತಾದಿಗಳಿಗೆ ನೆರವಾಗುವಂತೆ ವ್ಯವಸ್ಥೆಗಾಗಿ ಆಸುಪಾಸಿನಲ್ಲಿ ಆಯ್ದ 10 ಕಡೆ ಕುಡಿಯುವ ನೀರಿನ ವ್ಯವಸ್ಥೆ, ಶಾಶ್ವತ ಶೌಚಾಲಯಗಳು, ಕಲ್ಯಾಣಿಗಳನ್ನು ಶುಚಿಗೊಳಿಸುವುದು ಮತ್ತಿತರ ಕಾರ್ಯಕ್ರಮಗಳ ಬಗೆಗೂ ಸಭೆಯು ಚರ್ಚಿಸಿತು. ಸಭೆಯಲ್ಲಿ ಜಿ.ಪಂ. ಸಿಇಒ ಜಯರಾಂ, ಉಪ ವಿಭಾಗಾಧಿಕಾರಿ ಜಿ.ಪ್ರಭು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ ಇದ್ದರು.