ಬೆಂಗಳೂರು: ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇನ್ನಷ್ಟು ಜನಸ್ನೇಹಿ ಆಗಬೇಕು. ಉದ್ಯಮಿಗಳು ಕೈಗಾರಿಕೆಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಅಗತ್ಯವಾದ ಪ್ರಮಾಣಪತ್ರವನ್ನು ಸಕಾಲಕ್ಕೆ ನೀಡುವುದಿಲ್ಲ ಎಂಬ ದೂರುಗಳಿವೆ. ಆದ್ದರಿಂದ ಈ ಬಗ್ಗೆ ಮಂಡಳಿಯು ಕ್ರಿಯಾಶೀಲವಾಗಬೇಕು’ ಎಂದು ರಾಜ್ಯ ಪರಿಸರ ವಿಜ್ಞಾನ ಮತ್ತು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಸೂಚಿಸಿದರು.
ಮಂಡಳಿಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಂಡಳಿಗೆ ಅಗತ್ಯವಾದ ಎಲ್ಲ ರೀತಿಯ ಸಹಾಯವನ್ನು ಇಲಾಖೆ ನೀಡಲಿದೆ. ಆದರೆ ಪ್ರಮುಖ ಸ್ಥಳಗಳಲ್ಲಿ ಪರಿಸರ ಹಾನಿಯಿಂದ ಆಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಫಲಕಗಳನ್ನು ಹಾಕಬೇಕು’ ಎಂದು ಸಲಹೆ ನೀಡಿದರು.
ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಮಾತನಾಡಿ, ‘ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳೊಂದಿಗೆ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು. ಮಂಡಳಿಯ ಅಭಿವೃದ್ಧಿ ಕುರಿತಂತೆ ಸೂಕ್ತ ಸಲಹೆಗಳು ಬಂದಿವೆ. ಅವುಗಳನ್ನು ಅಳವಡಿಸಿಕೊಳ್ಳಲಾಗುವುದು’ ಎಂದರು.
ಮಾಜಿ ಅಧ್ಯಕ್ಷ ಬಿ.ಶಿವಲಿಂಗಯ್ಯ, ಮಾಜಿ ಸದಸ್ಯ ಕಾರ್ಯದರ್ಶಿ ಕ್ಯಾ.ಎಸ್.ರಾಜಾರಾವ್ ಮಾತನಾಡಿದರು. ಮಂಡಳಿಯ ಸ್ಥಾಪಕ ಅಧ್ಯಕ್ಷ ಎಚ್.ಎಸ್.ಎಲ್.ಮೂರ್ತಿ ಸಂಸ್ಥೆಯ ತ್ರೈಮಾಸಿಕ ‘ಕರ್ನಾಟಕ ಪರಿಸರ ವಾಹಿನಿ’ಯನ್ನು ಬಿಡುಗಡೆ ಮಾಡಿದರು. ನಂತರ ಕಲಾವಿದೆ ಸುಧಾ ಬರಗೂರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.