ಬಾಂಡೋಸ್ ದ್ವೀಪ (ಮಾಲ್ಡೀವ್ಸ್): ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಮತ್ತು ಮಾಲ್ಡೀವ್ಸ್ ಕನ್ನಡಿಗರ ಸಂಯುಕ್ತ ಆಶ್ರಯದಲ್ಲಿ 6ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಮಾಲ್ಡಿವ್ಸ್ ಕನ್ನಡಿಗರ ಬಳಗದ ಉದ್ಘಾಟನೆ ಇತ್ತೀಚೆಗೆ ಇಲ್ಲಿ ನಡೆಯಿತು.
ಕನ್ನಡಿಗರ ಬಳಗವನ್ನು ಉದ್ಘಾಟಿಸಿದ ಶ್ರೀನಿವಾಸ್ ಶೆಟ್ಟಿ ಅವರು ಮಾಲ್ಡೀ ವ್ಸ್ ರಾಷ್ಟ್ರದ ವಿವಿಧ ದ್ವೀಪಗಳಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಒಂದೆಡೆ ಸೇರಲು ಒಂದು ವೇದಿಕೆಯ ಅಗತ್ಯವಿತ್ತು. ಅದನ್ನು ಕಾರ್ಯಗತಗೊಳಿಸುವಲ್ಲಿ ವಿಶ್ವ ಸಂಸ್ಕೃತಿ ಸಮ್ಮೇಳನ ಸಮಿತಿ ಯಶಸ್ವಿಯಾಗಿದೆ ಎಂದು ಹೇಳಿದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಇಂ.ಕೆ.ಪಿ. ಮಂಜುನಾಥ್ ಸಾಗರ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಮಾಲ್ಡೀವ್ಸ್ ಕನ್ನಡಿಗರ ಸಹಕಾರದಿಂದ ಕನ್ನಡ ಬಳಗ ಸ್ಥಾಪಿಸುವ ಯತ್ನ ಯಶಸ್ವಿಯಾಗಿದೆ ಎಂದು ಹೇಳಿದರು. ಹೊಸದಾಗಿ ಇಲ್ಲಿಗೆ ಬರುತ್ತಿರುವ ಕನ್ನಡಿಗರಿಗೆ ಬಳಗ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.
ಕನ್ನಡ ಬಳಗದ ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ಮಾಲ್ಡೀವ್ಸ್ನ ಬೇರೆ ಬೇರೆ ದ್ವೀಪಗಳಲ್ಲಿ ಇನ್ನೂರಕ್ಕೂ ಹೆಚ್ಚು ಕನ್ನಡಿಗರು ಇದ್ದಾರೆ. ಇವರೆಲ್ಲರ ಮಧ್ಯೆ ಸಂಪರ್ಕ ಏರ್ಪಡಿಸುವ ಕೆಲಸ ನಾವು ಮಾಡಬೇಕಾಗಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರು ಬಳಗ ಬಲಪಡಿಸುವ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ನಾಗೂರ್ ಬಿಜಾಪುರ ಅವರು ವಿದೇಶದಲ್ಲಿರುವ ಕನ್ನಡಿಗರ ಸಂಘಟನೆಗಳೊಂದಿಗೆ ಸೌಹಾರ್ದ ಬಾಂಧವ್ಯ ಹೊಂದುವುದರ ಜತೆಗೆ ಅಲ್ಲಿಯ ಕನ್ನಡಿಗರ ಮಕ್ಕಳಿಗೆ ಕನ್ನಡ ಮತ್ತು ಕನ್ನಡದ ಮೇಲೆ ಅಭಿಮಾನ ಮೂಡುವಂತೆ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ಕುಮಟದ ರೋಹಿದಾಸ್ ನಾಯಕ, ಬೆಂಗಳೂರಿನ ಪ್ರಮೀಳ ಪ್ರಕಾಶ್ ಮತ್ತು ಪ್ರಹ್ಲಾದ್ ಬೋವಿ ಬಾಗಲಕೋಟೆ ಅವರಿಗೆ ಗೌರವ ಪ್ರಶಸ್ತಿ ನೀಡಲಾಯಿತು.