ಮಾಲೆ/ನವದೆಹಲಿ (ಪಿಟಿಐ): ಮಾಲ್ಡೀವ್ಸ್ನ ಮಾಜಿ ಅಧ್ಯಕ್ಷ ಮೊಹಮದ್ ನಶೀದ್ ಅವರು ಶನಿವಾರ ಸಂಜೆ ಭಾರತದ ಹೈಕಮಿಷನ್ ಕಚೇರಿಯಿಂದ ಹೊರಬರುವ ಮೂಲಕ 11 ದಿನಗಳ ರಾಜತಾಂತ್ರಿಕ ಬಿಕ್ಕಟ್ಟು ಕೊನೆಗೊಂಡಿತು.
ಶನಿವಾರ ಸಂಜೆ 4.15ಕ್ಕೆ ನಶೀದ್ ಅವರು ಇಲ್ಲಿನ ಭಾರತೀಯ ಹೈಕಮೀಷನ್ ಕಚೇರಿಯಿಂದ ಹೊರಬರುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಅವರ ಅಭಿಮಾನಿಗಳು ಅವರಿಗೆ ಸ್ವಾಗತ ಕೋರಿದರು.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ವಾಹೀದ್ ಅವರ ಮಾಧ್ಯಮ ಕಾರ್ಯದರ್ಶಿ ಮಾಸೂದ್ ಅವರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, ಸದ್ಯ ನಶೀದ್ ಅವರ ವಿರುದ್ದ ಯಾವುದೇ ಬಂಧನ ವಾರೆಂಟ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಶೀದ್ ಅವರು ತಮ್ಮ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಸಕ್ರಿಯರಾಗಿ ಕೆಲಸ ಮಾಡಲಿ ಎಂದು ಭಾರತ ಹಾರೈಸಿದೆ.
ಇಲ್ಲಿಗೆ ಆಗಮಿಸಿದ್ದ ಹರ್ಷವರ್ಧನ ಶ್ರಿಂಗ್ಲಿ ಅವರ ನೇತೃತ್ವದ ಭಾರತದ ಉನ್ನತ ಮಟ್ಟದ ನಿಯೋಗವು ಕಳೆದರಡು ದಿನಗಳಿಂದ ಸರ್ಕಾರದ ಪ್ರತಿನಿಧಿಗಳೊಂದಿಗೆ, ವಿರೋಧ ಪಕ್ಷದವರೊಂದಿಗೆ ಮಾತುಕತೆಯಲ್ಲಿ ತೊಡಗಿ ಬಿಕ್ಕಟ್ಟು ನಿವಾರಣೆಗೆ ಶ್ರಮಿಸಿತ್ತು.