ಬೆಂಗಳೂರು: ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಸವಿಯುವ ಸಂಭ್ರಮ ಅಲ್ಲಿ ಮನೆ ಮಾಡಿತ್ತು. ಮಾವಿನ ಹಣ್ಣಿನ ಬಗ್ಗೆ ಇರುವ ಕಥೆ, ಹಾಡುಗಳನ್ನು ಕೇಳುವ ಕಾತರ ಅಲ್ಲಿದ್ದ ಪುಟ್ಟ ಮಕ್ಕಳಲ್ಲಿ ಕಾಣುತ್ತಿತ್ತು. ಅವರೊಟ್ಟಿಗೆ ಪೋಷಕರು ಅಲ್ಲಿನ ಬಗೆ ಬಗೆಯ ಮಾವಿನ ಹಣ್ಣುಗಳ ಮೇಲೆ ಕಣ್ಣು ಮತ್ತು ಮನಸ್ಸು ನೆಟ್ಟಿದ್ದರು. ಹೀಗೆ ಅಲ್ಲಿನ ವಾತಾವರಣ ಸಂಪೂರ್ಣ ಮಾವುಮಯವಾಗಿತ್ತು.
ರಂಗಶಂಕರ ಭಾನುವಾರ ನಗರದಲ್ಲಿ ಅಯೋಜಿಸಿದ್ದ `ಮಾವಿನ ಹಬ್ಬ'ದಲ್ಲಿ ಕಂಡು ಬಂದ ದೃಶ್ಯವಿದು. ಮಾವಿನ ಹಬ್ಬದಲ್ಲಿ ಎಲ್ಲರೂ ತಾವು ತಂದ ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ವಿನಿಮಯ ಮಾಡಿಕೊಂಡು ಸವಿದರು.
ಹಬ್ಬದ ಬಗ್ಗೆ ಮಾತನಾಡಿದ ರಂಗಶಂಕರದ ವ್ಯವಸ್ಥಾಪಕ ಟ್ರಸ್ಟಿ ಅರುಂಧತಿ ನಾಗ್, `ಕಳೆದ ಹದಿನಾರು ವರ್ಷಗಳಿಂದ ಮಾವಿನ ಹಬ್ಬವನ್ನು ಆಯೋಜಿಸುತ್ತಿದ್ದೇವೆ. ಪ್ರತಿಯೊಬ್ಬರು ಕಾರ್ಯಕ್ರಮಕ್ಕೆ ಬರುವಾಗ ಒಂದು ಕೆ.ಜಿ. ಮಾವಿನ ಹಣ್ಣುಗಳನ್ನು ತರುತ್ತಾರೆ. ನಂತರ ಎಲ್ಲರೂ ತಾವು ತಂದ ಹಣ್ಣನ್ನು ಹಂಚಿ ತಿನ್ನುತ್ತಾರೆ. ಹಂಚಿ ತಿನ್ನುವುದೇ ಮಾವಿನ ಹಬ್ಬದ ವಿಶೇಷ' ಎಂದು ಹೇಳಿದರು.
`ಸಮುದಾಯ ಪ್ರಜ್ಞೆ ಮರೆಯಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ಕಾರ್ಯಕ್ರಮಗಳು ಜನರಲ್ಲಿ ಸಹಬಾಳ್ವೆ, ಸೌಹಾರ್ದತೆ, ಹಂಚಿಕೊಂಡು ತಿನ್ನುವ ಪ್ರವೃತ್ತಿ ಬೆಳೆಸುತ್ತವೆ. ಮಕ್ಕಳು ಇದರಿಂದ ತುಂಬಾ ಖುಷಿ ಪಡುತ್ತಾರೆ' ಎಂದರು.
ಬಾದಾಮಿ, ತೋತಾಪುರಿ, ಕೇಸರಿ, ಮಲಗೋವಾ ಸೇರಿದಂತೆ ವಿವಿಧ ತಳಿಯ ಹಣ್ಣುಗಳು ಅಲ್ಲಿ ಜನರಿಗೆ ಸಿಹಿಯುಣಿಸಿದವು. ಮಾವಿನ ಹಣ್ಣಿನ ಬಗ್ಗೆ ಇರುವ ಕಥೆಗಳು ಹಾಗೂ ಹಾಡುಗಳನ್ನು ಕೇಳಿ ಮಕ್ಕಳು ನಲಿದರು.
ಸವಿ...
ನಾಲ್ಕು ವರ್ಷಗಳಿಂದ ಮಗಳ ಜತೆಗೆ ಈ ಮಾವಿನ ಹಬ್ಬಕ್ಕೆ ಬರುತ್ತಿದ್ದೇನೆ. ಇಲ್ಲಿ ಬಗೆ ಬಗೆಯ ಹಣ್ಣುಗಳನ್ನು ಸವಿಯಬಹುದು. ಶಾಲೆ- ಪಾಠದ ಒತ್ತಡದಲ್ಲಿ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ನನ್ನ ಮಗಳು ಇದರಿಂದ ಖುಷಿಯಾಗಿದ್ದಾಳೆ. ಮಾವಿನ ಹತ್ತಾರು ತಳಿಗಳನ್ನು ತಿಳಿದುಕೊಳ್ಳುವ ಜತೆಗೆ ಇಲ್ಲಿ ಸವಿಯಬಹುದು - ಮಾಲಿನಿ, ಅರಕೆರೆ.