ಅಫಜಲಪುರ: ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ರಾಷ್ಟ್ರೀಯ ಕುಡಿಯುವ ನೀರು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಶಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಗ್ರಾಮಗಳಿಗೆ 2 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು ಒಂದು ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಜಿ.ಪಂ ಸದಸ್ಯ ಪ್ರಕಾಶ ಜಮಾದಾರ ತಿಳಿಸಿದರು.
ತಾಲ್ಲೂಕಿನ ಮಾಶಾಳ ಗ್ರಾಮದ ರಾಮನಗರ, ಬಸವನಗರ, ಗೊಳ್ಳಾಲೇಶ್ವರ ನಗರಗಳಿಗೆ ಕುಡಿಯುವ ನೀರಿಗಾಗಿ ಕೊಳವೆ ಭಾವಿ ಮತ್ತು ಪೈಪ್ಲೈನ ಅಳವಡಿಸಲು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು 15 ಲಕ್ಷ ರೂಪಾಯಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಅಭಿವೃದ್ಧಿ ಅಡಿಯಲ್ಲಿ ಜೇವರ್ಗಿ(ಕೆ) 20, ಸೊನ್ನ 25, ಬೋಸಗಾ 20 ಮತ್ತು ಮಾಶಾಳ
ಗ್ರಾಮಕ್ಕೆ 15 ಲಕ್ಷ ರೂಪಾಯಿ ಕುಡಿಯುವ ನೀರಿನ ಯೋಜನೆಗಳಿಗೆ ಈ ಗ್ರಾಮಗಳು ಆಯ್ಕೆ ಆಗಿದ್ದು ಅಲ್ಲದೆ ಮಾಶಾಳ ಮತ ಕ್ಷೇತ್ರದ ಕುಡಿಯುವ ನೀರು ತೊಂದರೆ ಇರುವ ಗ್ರಾಮಗಳಲ್ಲಿ ಒಟ್ಟಾರೆ ಆಗಿ 2 ಕೋಟಿ ರೂಪಾಯಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ವಾರದಲ್ಲಿ ಕೆಲಸ ಆರಂಭವಾಗುತ್ತವೆ ಎಂದು ಅವರು ತಿಳಿಸಿದರು. ಮಾಶಾಳ ಗ್ರಾಮಕ್ಕೆ ಬಿಆರ್ಜಿಎಫ್ ಹಾಗೂ 13ನೇ ಹಣಕಾಸಿನಲ್ಲಿ 9 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮಾಡಲಾಗುತ್ತದೆ.
ಅಲ್ಲದೆ ಮಾಶಾಳದ ಭೀರಲಿಂಗೇಶ್ವರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಮೊದಲು ಕಂತಾಗಿ 5 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಮುಖಂಡರಾದ ಸುರೇಶ ರಾಖಾ, ಶಿವರುದ್ರ ಅವಟಿ, ಶಿವಾನಂದ ಪ್ಯಾಟಿ, ಮಹೇಶ ಪಾಟೀಲ, ಹನುಮಂತ ಬಾರಾಮಣಿ, ಲಕ್ಷ್ಮಣ ನಾವಿ, ದಯಾನಂದ ಪಾರಗೊಂಡ, ಬಸವರಾಜ ಕಾಚಾಪುರೆ ಹಾಗೂ ಸಹಾಯಕ ಎಂಜಿನಿಯರ ವಿಶ್ವನಾಥ ಉಪಸ್ಥಿತರಿದ್ದರು.