ರಾಯಚೂರು: ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಪಡೆಯುವ ಹಕ್ಕು ಅಧಿನಿಯಮ-2005ರಡಿ ತಾವು ವಿವಿಧ ಇಲಾಖೆ ಮಾಹಿತಿ ಕೋರಿದಾಗ ಮಾಹಿತಿ ದೊರಕಿಸದೇ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿರುವ ಜಿಲ್ಲೆಯ ವಿವಿಧ ಇಲಾಖೆಗಳ 7 ಅಧಿಕಾರಿಗಳಿಗೆ ಒಟ್ಟು 1.15 ಲಕ್ಷ ದಂಡವನ್ನು ಕರ್ನಾಟಕ ಮಾಹಿತಿ ಆಯೋಗವು ವಿಧಿಸಿದೆ ಎಂದು ಜಿಲ್ಲಾ ಮಾನವ ಹಕ್ಕುಗಳ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಚಂದ್ರಕಾಂತ ವಕೀಲ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿಳಂಬ ನೀತಿಯ ವಿರುದ್ಧ ಬೆಂಗಳೂರಿನ ಕರ್ನಾಟಕ ಮಾಹಿತಿ ಆಯೋಗವು ನ್ಯಾಯಾಲಯದಲ್ಲಿ ಮೇಲ್ಮನವಿ ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಅದರನ್ವಯ ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆಯನ್ನು ಮಾಹಿತಿ ಆಯೋಗ ಹಮ್ಮಿಕೊಂಡಿತ್ತು. ಈ ಪ್ರಕರಣದಲ್ಲಿ ತಾವು ಪಿರ್ಯಾದಿದಾರರಾಗಿದ್ದು ಮಾಹಿತಿ ಆಯೋಗ ವಿಚಾರಣೆ ನಡೆಸಿದಾಗ ಗಂಭೀರವಾಗಿ ವಾದ ಮಂಡಿಸಿದಾಗ ಮಾಹಿತಿ ಆಯೋಗವು ಜಿಲ್ಲೆಯ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ವಿಚಾರಣೆ ನಡೆಸಿ 1.15 ಲಕ್ಷ ಹಣ ದಂಡ ವಿಧಿಸಿದೆ ಎಂದರು.
ಸರ್ಕಾರದ ಲೆಕ್ಕ ಶಿರ್ಷಿಕೆ ಖಾತೆ ಸಂಖ್ಯೆಗೆ ದಂಡದ ಮೊತ್ತ ಜಮಾ ಮಾಡಿದ ರಸೀದಿಯೊಂದಿಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಎಂ.ವಿ ಸಾವಿತ್ರಿ, ಜಿಪಂ ಸಿಇಓ ಅವರಿಗೆ, ಪಂಚಾಯತರಾಜ್ ಎಂಜಿನಿಯರಿಂಗ್ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎನ್ ಪ್ರಕಾಶ್ ಅವರಿಗೆ ಮಾಹಿತಿ ಹಕ್ಕು ಕಾಯಿದೆ ಕಲಂ 19(8)(ಎ) ಅನ್ವಯ ನಿರ್ದೇಶಿಸಿದೆ. ಈ ದಂಡವನ್ನು ಸರ್ಕಾರಿ ಅಧಿಕಾರಿಗಳ ಸಂಬಳದಲ್ಲಿ ಪ್ರತಿ ತಿಂಗಳು 5 ಸಾವಿರ ಕಂತಿನ ರೂಪದಲ್ಲಿ ಕಡಿತಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಕೊಡದ ಮಾಹಿತಿ
2009-10ನೇ ಸಾಲಿಗಾಗಿ ಅತಿವೃಷ್ಠಿ ಅನಾವೃಷ್ಟಿ ಪ್ರವಾಹದಡಿಯಲ್ಲಿ ಸಿಂಧನೂರು ತಾಲ್ಲೂಕಿನ ತಿಡಿಗೋಳದಿಂದ ತುರವಿಹಾಳ ರಸ್ತೆ ಕಾಮಗಾರಿಯ ಅಂದಾಜು ಪಟ್ಟಿ ದೊರಕಿಸದೇ ಇರುವುದು, ರಸ್ತೆ ಕಾಮಗಾರಿ ಅಂದಾಜು ಪಟ್ಟಿ ಮಾಹಿತಿ ಕೊಡದೇ ಇರುವುದು, ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿದ ಅರ್ಜಿದಾರರ ಮಾಹಿತಿ ದೊರಕಿಸದೇ ಇರುವುದು, ರಸ್ತೆ ನಿರ್ಮಾಣ ಕಾಮಗಾರಿ ಅಂದಾಜು ಪಟ್ಟಿ ಕೊಡದೇ ಇರುವುದು, ವಿವಿಧ ಯೋಜನೆಯಡಿ ಮಾಡಲಾದ ಕಾಮಗಾರಿ ಬಗ್ಗೆ ಮಾಹಿತಿ ದೊರಕಿಸದೇ ಇರುವುದು ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಪಂಚಾಯತ ರಾಜ್ ಎಂಜಿನಿಯರಿಂಗ್ ಉಪವಿಭಾಗಗಳ ಅಧಿಕಾರಿಗಳಿಗೆ, ಗೃಹ ನಿರ್ಮಾಣ ಮಂಡಳಿ ಉಪ ವಿಭಾಗದ 7 ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗ ನ್ಯಾಯಾಲಯವ 12 ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ವಿಧಿಸಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.