ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಸಾಕು; ಪ್ರತಿಭೆಗೆ ಮನ್ನಣೆ ಬೇಕು

Last Updated 12 ಅಕ್ಟೋಬರ್ 2011, 5:20 IST
ಅಕ್ಷರ ಗಾತ್ರ

ದಾವಣಗೆರೆ: ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡುವ ಬದಲು ಇರುವ ಮೀಸಲಾತಿಯ ಜತೆಗೆ, ಪ್ರತಿಭೆ ಮೂಲಕ ಮುಂದೆ ಬರಲು ಪ್ರಯತ್ನಿಸುವಂತೆ ನಾಯಕ ಸಮಾಜದ ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಜಾತಿ, ಸಮುದಾಯದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಬಡವರು ಇದ್ದಾರೆ. ಅವರ ಬಗ್ಗೆಯೂ ಗಮನಹರಿಸಬೇಕು. ಈಗ ಇರುವ ಮೀಸಲಾತಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೊಸದಾಗಿ 7.5 ಮೀಸಲಾತಿ ಹೋರಾಟ ಕೈಬಿಡಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿಯೊಬ್ಬರೂ ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣ ಗ್ರಂಥವನ್ನು ಅಧ್ಯಯನ ಮಾಡಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಮಹಾನ್ ಪುರುಷರನ್ನು ಒಂದು ಜಾತಿ, ವರ್ಗಕ್ಕೆ ಸೀಮಿತಗೊಳಿಸುವ ಪ್ರಯತ್ನ ಮಾಡುತ್ತಿರುವುದು ವಿಷಾದನೀಯ ಎಂದರು.

ರಾಮಾಯಣ, ಮಹಾಭಾರತ ಕೃತಿಗಳು ವಿಶ್ವದಲ್ಲೇ ಭಾರತಕ್ಕೆ ಸಾಂಸ್ಕೃತಿಕ ಹಿರಿಮೆ ದೊರಕಿಸಿಕೊಟ್ಟ ಕೃತಿಗಳು. ರಾಮಾಯಣದ ರಾಮ ಈ ನಾಡಿನ ಭೂಮಿಯ ಪ್ರೀತಿಯನ್ನು, ಗೌರವಯುತ ಬದುಕಿನ ರೀತಿಯನ್ನು ಸಮಾಜಕ್ಕೆ ಕಲಿಸಿದ ಮಹಾನ್ ಪುರುಷ. ಅಂತಹ ವ್ಯಕ್ತಿಯ ಬಗ್ಗೆ ಮಾತನಾಡುವುದು.

ರಾಮಾಯಣ, ಮಹಾಭಾರತದ ಭಾಗವನ್ನು ವಿದ್ಯಾರ್ಥಿಗಳಿಗೆ ಪಠ್ಯವಾಗಿಸುವುದನ್ನು ಕೇಸರೀಕರಣ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಅದು ಸಲ್ಲದು. ನಾಡು, ನುಡಿ, ನಮ್ಮ ಸಂಸ್ಕೃತಿಯ ವೈಭವ ನೆನಪಿಸುವ ಜತೆಗೆ, ಎಲ್ಲರೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೋರಿದರು.

ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜನಾಯ್ಕ ಮಾತನಾಡಿ, ದೇಶಕ್ಕೆ ರಟ್ಟೆಯ ಶಕ್ತಿ ನೀಡಿದ್ದು ನಾಯಕ ಸಮಾಜ. ಸರ್ಕಾರ ಹಿಂದುಳಿದ ವರ್ಗಕ್ಕೆ ಸಾಕಷ್ಟು ಸವಲತ್ತು ನೀಡಿದೆ. ಆದರೆ, ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ದೇಶದ ವಿವಿಧೆಡೆ ಇನ್ನೂ ತಾರತಮ್ಯವಿದೆ. ಜಾತಿಗಳ ರಕ್ಷಣೆಯಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿದರು.ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, `ದೂಡಾ~ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಜಿಲ್ಲಾ ಪಂಚಾಯ್ತಿ ಸಿಇಒ ಗುತ್ತಿ ಜಂಬುನಾಥ್, ಪ್ರಭಾರ ಅಧ್ಯಕ್ಷೆ ಜಯಲಕ್ಷ್ಮೀ, ಸದಸ್ಯೆ ಸಹನಾ ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ವೆಂಕಟೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರತಿಭಾ ಮಲ್ಲಿಕಾರ್ಜುನ್, ಸಮಾಜದ ಮುಖಂಡರಾದ ಟಿ. ದಾಸಕರಿಯಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್, ಹೂವಿನಮಡು ಚಂದ್ರಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪಿ.ಕೆ. ಮಹಾಂತೇಶ್, ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ಆದರ್ಶ ಪಾಲಿಸಿ
ಮಹರ್ಷಿ ವಾಲ್ಮೀಕಿ ಅವರು ತಮ್ಮ ಬದುಕಿನಲ್ಲಿ ಬದಲಾದಂತೆ ಬಿಜೆಪಿ ಕಾರ್ಯಕರ್ತರು ಬದಲಾಗಬೇಕು ಎಂದು ಸಚಿವ ಎಸ್.ಎ. ರವೀಂದ್ರನಾಥ್ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕರ್ತರು ಬದಲಾವಣೆ ಮೂಲಕ ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಶೋಷಣೆ, ಅನ್ಯಾಯದ ವಿರುದ್ಧ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಹಿಂದಿನ ಸರ್ಕಾರಗಳು ಪರಿಶಿಷ್ಟ ಜಾತಿ, ವರ್ಗಗಳ ಕಲ್ಯಾಣ ಕಾರ್ಯಕ್ಕೆ ್ಙ 1,200 ಕೋಟಿ ನೀಡಿವೆ.

ಬಿಜೆಪಿ ಸರ್ಕಾರ ್ಙ  6,000 ಕೋಟಿ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದೆ. ಜಿಲ್ಲೆಗೆ ಪರಿಶಿಷ್ಟ ಜಾತಿ, ವರ್ಗದ 500 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ವಿದ್ಯಾರ್ಥಿನಿಲಯ ಮಂಜೂರು ಮಾಡಿದೆ. ಇದು ನಮ್ಮ ಸರ್ಕಾರದ ಕೊಡುಗೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ. ಗುರುಸಿದ್ದನಗೌಡ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ್, ಜಿ.ಪಂ. ಸದಸ್ಯ ಸಹನಾ ರವಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರತಿಭಾ ಮಲ್ಲಿಕಾರ್ಜುನ, ಉಪಾಧ್ಯಕ್ಷ ಶಿವರುದ್ರಪ್ಪ, `ದೂಡಾ~ ಅಧ್ಯಕ್ಷ ಯಶವಂತರಾವ್ ಜಾಧವ್, ಪಕ್ಷದ ಎಸ್‌ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ, ಎಲ್.ಎಂ. ಕಲ್ಲೇಶ್, ಪಿ.ಎಸ್. ಜಯಣ್ಣ, ಓಂಕಾರಪ್ಪ ಇತರರು ಇದ್ದರು.

ವಾಲ್ಮೀಕಿ ಮಹಾನ್ ದಾರ್ಶನಿಕ
ಚನ್ನಗಿರಿ: ವಾಲ್ಮೀಕಿ ಒಂದು ವರ್ಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ರಾಮಾಯಣ ಎಂಬ ಮಹಾನ್ ಗ್ರಂಥವನ್ನು ರಚಿಸಿ, ದೇಶಕ್ಕೆ ಕೊಡುಗೆಯಾಗಿ ನೀಡಿದ ಮಹಾನ್ ದಾರ್ಶನಿಕ ವ್ಯಕ್ತಿಯಾಗಿದ್ದರು. ಅವರ ಆದರ್ಶ, ತತ್ವಗಳನ್ನು ನಾವೆಲ್ಲಾ ಅನುಸರಿಸಬೇಕು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ಪಟ್ಟಣದ ಕಾಲಸ್ವಾಮಿ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ತಾಲ್ಲೂಕು ನಾಯಕ ಸಮಾಜದ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಮಾತನಾಡಿದರು. ಹೊಳಲ್ಕೆರೆ ಮಾಜಿ ಶಾಸಕ ಎ.ವಿ. ಉಮಾಪತಿ, ತಾ.ಪಂ. ಅಧ್ಯಕ್ಷ ಅನಸೂಯಮ್ಮ, ಉಪಾಧ್ಯಕ್ಷ ಎನ್. ಗಣೇಶ್ ನಾಯ್ಕ, ಪ.ಪಂ. ಅಧ್ಯಕ್ಷ ಪುಷ್ಪಲತಾ, ಉಪಾಧ್ಯಕ್ಷ ಕೆ.ಪಿ.ಎಂ. ಶಿವಲಿಂಗಯ್ಯ, ಜಿ.ಪಂ. ಸದಸ್ಯೆ ಪ್ರೇಮಾ ಸಿದ್ದೇಶ್ ಮುಂತಾದವರು ಉಪಸ್ಥಿತರಿದ್ದರು. ಜಿ.ಪಂ. ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ ಹಾಗೂ ಪ್ರಾಧ್ಯಾಪಕ ಕೆ.ಬಿ. ಕುಬೇರಪ್ಪ ಉಪನ್ಯಾಸ ನೀಡಿದರು. ಪಿ. ಲೋಹಿತ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅನೇಕ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.

ಚಿತ್ರದುರ್ಗದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಚನ್ನಗಿರಿ ಹಾಲಸ್ವಾಮಿ ವಿರಕ್ತ ಮಠದ ಜಯದೇವ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಎನ್.ಪಿ. ಭೋಜರಾಜ್ ಅಧ್ಯಕ್ಷತೆ ವಹಿಸಿದ್ದರು. ಅನಿಲ್‌ಕುಮಾರಿ ಪ್ರಾರ್ಥಿಸಿದರು. ಎಚ್.ಎಂ. ರೇವಣಸಿದ್ದಪ್ಪ ಸ್ವಾಗತಿಸಿದರು. ಹೊದಿಗೆರೆ ರಮೇಶ್ ಕಾರ್ಯಕ್ರಮ ನಿರೂಪಿಸಿದರು.

ಆಚರಣೆ
ಬಸವಾಪಟ್ಟಣ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ವೈದ್ಯಾಧಿಕಾರಿ ಡಾ.ಜಿ.ಆರ್. ತಿಪ್ಪೇಶನಾಯ್ಕ ಮಾತನಾಡಿ, ಜಗತ್ತಿನ ಮೊಟ್ಟಮೊದಲ ಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳು, ರಾಮಾಯಣದಂತಹ ಶ್ರೇಷ್ಠ ಕೃತಿಯಲ್ಲಿ ಚಿತ್ರಿಸಿರುವ ಪಾತ್ರಗಳು ನಮಗೆ ಆದರ್ಶಪ್ರಾಯವಾಗಿವೆ ಎಂದರು. 

  ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್. ಇಬ್ರಾಹಿಂ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು. ಜಿ. ಶ್ರೀನಿವಾಸ ಸ್ವಾಗತಿಸಿದರು. ಎಸ್. ನಾಗರಾಜ ವಂದಿಸಿದರು.

ಅಹಿಂಸಾ ತತ್ವಗಳ ಪ್ರತಿಪಾದಕ
ಹರಪನಹಳ್ಳಿ: ಜಗತ್ತಿನ ಮೊಟ್ಟಮೊದಲ ಆದಿಕವಿ ಎಂದೇ ಪ್ರಸಿದ್ಧಿಯಾಗಿರುವ ಮಹರ್ಷಿ ವಾಲ್ಮೀಕಿ, ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವ ಮೂಲಕ ಇಡೀ ಪ್ರಪಂಚದಲ್ಲಿಯೇ ಭಾರತದ ಪಾವಿತ್ರ್ಯತೆಯ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಉಪ ವಿಭಾಗಾಧಿಕಾರಿ (ಪ್ರೊಬೆಷನ್) ಬಿ. ಅನುರಾಧಾ ಬಣ್ಣಿಸಿದರು.

ಮಂಗಳವಾರ ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜು ಮುಂಭಾಗದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 
ಜಯಂತ್ಯುತ್ಸವ ಉದ್ಘಾಟಿಸಿ ಶಾಸಕ ಜಿ. ಕರುಣಾಕರರೆಡ್ಡಿ ಮಾತನಾಡಿ, ಪಟ್ಟಣದಲ್ಲಿ ವಾಲ್ಮೀಕಿ ಭವನ ಕಟ್ಟಡದ ನಿರ್ಮಾಣಕ್ಕಾಗಿ ಸರ್ಕಾರ ್ಙ 1ಕೋಟಿ ಅನುದಾನ ಮಂಜೂರು ಮಾಡಿದೆ. ಸಮುದಾಯ ಸೂಕ್ತ ಜಾಗ ಸೂಚಿಸಿದರೆ, ಶೀಘ್ರದಲ್ಲಿಯೇ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಕುರಿತು ನಿವೃತ್ತ ಪ್ರಾಂಶುಪಾಲ ಜಿ. ಬಸವಂತಪ್ಪ ವಿಶೇಷ ಉಪನ್ಯಾಸ ಮಂಡಿಸಿದರು.

ತಾ.ಪಂ. ಅಧ್ಯಕ್ಷೆ ಜಯಮಾಲಾ, ಪುರಸಭಾ ಅಧ್ಯಕ್ಷ ಬಿ. ಮಹಬೂಬ್ ಸಾಹೇಬ್, ತಹಶೀಲ್ದಾರ್ ಡಾ.ವೆಂಕಟೇಶ್‌ಮೂರ್ತಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಟಿ. ಪಾಂಡ್ಯಪ್ಪ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸಿ. ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್. ಜತ್ತಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ಎಚ್.ಟಿ. ಗಿರೀಶಪ್ಪ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಮಾಜಿಕ ವ್ಯವಸ್ಥೆಗೆ ಮಾದರಿ
ಹರಿಹರ: `ಪ್ರಸ್ತುತ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಗೆ ಮಾದರಿಯಾಗುವಂಥ ಕಾವ್ಯ ರಚನೆ ಮೂಲಕ ಮಹರ್ಷಿ ವಾಲ್ಮೀಕಿ ಅವರು ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ~ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕು ಆಡಳಿತ ಹಾಗೂ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆಶ್ರಯದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ. ಹರೀಶ್ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ನೀರಾವರಿ ಇಲಾಖೆಯ ಆವರಣದಿಂದ ಪ್ರಾರಂಭಗೊಂಡ ವಾಲ್ಮೀಕಿ ಮಹರ್ಷಿ ಪುತ್ಥಳಿ ಮೆರವಣಿಗೆಗೆ ಶಾಸಕ ಬಿ.ಪಿ. ಹರೀಶ್ ಚಾಲನೆ ನೀಡಿದರು.  

ಮೆರವಣಿಗೆಯಲ್ಲಿ ರಾಜನಹಳ್ಳಿ ವಾಲ್ಮೀಕಿ ಸಂಸ್ಥಾನದ  ಪ್ರಸನ್ನಾನಂದ ಸ್ವಾಮೀಜಿ ಭಾಗವಹಿಸಿದ್ದರು. ಮಹರ್ಷಿ ವಾಲ್ಮೀಕಿ, ವೀರ ಮದಕರಿ, ರಾಮ, ಲಕ್ಷ್ಮಣ, ಸೀತಾ, ಆಂಜನೇಯ, ವೀರ ಸಿಂಧೂರ ಲಕ್ಷ್ಮಣ, ಏಕಲವ್ಯ, ಬೇಡರ ಕಣ್ಣಪ್ಪ, ಒನಕೆ ಓಬವ್ವ, ಶಬರಿ, ಕೃಷ್ಣದೇವರಾಯ ಅವರ ಸ್ಥಬ್ಧಚಿತ್ರಗಳು ಹಾಗೂ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಅಣ್ಣಾ ಹಜಾರೆ ಅವರ ಭಾವಚಿತ್ರಗಳು ಮೆರವಣಿಗೆಯಲ್ಲಿ ಇದ್ದವು. ಡೊಳ್ಳು, ಜಾಂಜ್, ನಂದಿಕೋಲು ಹಾಗೂ ಮಂಗಳವಾದ್ಯಗಳ ತಂಡಗಳು ಮೆರವಣಿಗೆಗೆ ಕಳೆ ಕಟ್ಟಿದ್ದವು.

ಸ್ವಾಮಿ ವೀರಭದ್ರಾನಂದಜಿ, ಜಿ.ಪಂ. ಉಪಾಧ್ಯಕ್ಷ ಟಿ. ಮುಕುಂದ, ತಾ.ಪಂ. ಅಧ್ಯಕ್ಷ ಸೋಮಸುಂದರಪ್ಪ, ಜಿ.ಪಂ. ಸದಸ್ಯರಾದ ವೀರಭದ್ರಪ್ಪ, ಎಸ್.ಎಂ. ವೀರೇಶ್, ತಾ.ಪಂ. ಸದಸ್ಯರಾದ ಕನ್ನಪ್ಪ, ಅಜ್ಜಾನಾಯ್ಕ, ತಹಶೀಲ್ದಾರ್ ಜಿ. ನಜ್ಮಾ, ಇಒ ಎಚ್.ಎನ್ ರಾಜ್, ಪೌರಾಯುಕ್ತ ಎಂ.ಕೆ. ನಲವಡಿ, ಸಿಪಿಐ ನಾಗೇಶ್ ಐತಾಳ್, ಉಪ ನೋಂದಣಾಧಿಕಾರಿ ಹೇಮಗಿರೀಶ್, ಹಾಗೂ ವಿವಿಧ ಇಲಾಖೆಗಳ ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಮಾಜಗಳ ಹಾಗೂ ವಾಲ್ಮೀಕಿ ಸಮಾಜದ ಗಣ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

 ಜನಮನಸೆಳೆದ ಮೆರವಣಿಗೆ
ಮಲೇಬೆನ್ನೂರು: ಹೋಬಳಿಮಟ್ಟದ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಮಂಗಳವಾರ ಮುಖ್ಯಬೀದಿಯಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಕರ್ನಾಟಕ ನೀರಾವರಿ ನಿಗಮದಲ್ಲಿನ ಚೌಡೇಶ್ವರಿ ದೇವಾಲಯದಿಂದ ಗ್ರಾಮ ಪಂಚಾಯ್ತಿ ಕಚೇರಿವರೆಗೆ ಮೆರವಣಿಗೆ ಹಮ್ಮಿಕೊಂಡಿತ್ತು.

ಕಚೇರಿ ಆವರಣದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸಿದ ನಂತರ ಜಯಘೋಷದೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.

ರಾಜಾ ಮದಕರಿನಾಯಕ, ಹನುಮಾನ್, ರಾಮ, ಅಣ್ಣಾ ಹಜಾರೆ ಹಾಗೂ ಅಂಬೇಡ್ಕರ್ ಭಾವಚಿತ್ರಗಳು ಅಲಂಕೃತ ಟ್ರಾಕ್ಟರ್‌ನಲ್ಲಿ ರಾರಾಜಿಸುತ್ತಿದ್ದವು. ಮುಖ್ಯವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು. ಯುವ ಸಮೂಹ ನಾಸಿಕ್‌ಡೋಲಿನ ತಾಳಕ್ಕೆ ನರ್ತಿಸಿತು.

ಗ್ರಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಗ್ರಾಮಗಳಿಂದ ಆಗಮಿಸಿದ ನಾಯಕ ಸಮುದಾಯದ ಮುಖಂಡರು, ಜನತೆ, ವಾಲ್ಮೀಕಿ ಯುವ ಸೇನೆ ಸದಸ್ಯರು ಆಗಮಿಸಿದ್ದರು.

ಮರೆತ ಪಕ್ಷಬೇಧ: ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ವಾಲ್ಮೀಕಿ ಜಯಂತ್ಯುತ್ಸವದ ಮೆರಣಿಗೆಯುದ್ದಕ್ಕೂ ತಂಡ ರಚಿಸಿಕೊಂಡು ಪಾದಯಾತ್ರೆಯಲ್ಲಿ ಸಾಗಿದ್ದು ವಿಶೇಷವಾಗಿ ಜನರ ಗಮನ ಸೆಳೆಯಿತು.

ಸಂಸ್ಕೃತಿಯ ರೂವಾರಿ
ಜಗಳೂರು: ಜಗತ್ತಿನ್ಲ್ಲಲೇ ಅತಿ ದೊಡ್ಡ  ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿ, ದೇಶದ ಸಂಸ್ಕೃತಿಯ ರೂವಾರಿಯಾಗಿದ್ದಾರೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ.ಆರ್. ಅಂಜಿನಪ್ಪ ಹೇಳಿದರು.

ತಾಲ್ಲೂಕು ಆಡಳಿತದ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಶಾಸಕ ಎಸ್.ವಿ. ರಾಮಚಂದ್ರ ಅವರು ವಿಧಾನಸೌಧದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಅವರ ಸಂದೇಶದ ಪತ್ರವನ್ನು ತಹಶೀಲ್ದಾರ್ ಅವರು ಸಭೆಯಲ್ಲಿ ವಾಚಿಸಿದರು.

ಮುಖಂಡ ಎಚ್.ಪಿ. ರಾಜೇಶ್, ಉಪನ್ಯಾಸಕ ಎಚ್. ವಸಂತ್ ಅವರು ವಾಲ್ಮೀಕಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿ.ಪಂ.ಸದಸ್ಯರಾದ ಎಚ್. ನಾಗರಾಜ್, ಪ.ಪಂ. ಅಧ್ಯಕ್ಷ ಜೆ.ವಿ. ನಾಗರಾಜ್, ಮುಖಂಡರಾದ ಬೋರಪ್ಪನಾಯಕ, ಕೃಷ್ಣಮೂರ್ತಿ, ಎಚ್.ಸಿ. ಮಹೇಶ್, ಎಸ್.ಕೆ. ಮಂಜುನಾಥ್, ಜಿ.ಎಚ್.ಶಂಭುಲಿಂಗಪ್ಪ, ರಾಜಪ್ಪ, ಎಸ್.ಬಿ. ತಿಪ್ಪನಾಯಕ, ಲತೀಫ್‌ಸಾಬ್  ಹಾಜರಿದ್ದರು. ಜಿ.ಪಂ.ಸದಸ್ಯ ಕೆ.ಪಿ. ಪಾಲಯ್ಯ ಸ್ವಾಗತಿಸಿದರು. ದೇವೇಂದ್ರಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT