ಯಾದಗಿರಿ: ದೇಶದಲ್ಲಿಯೇ 8 ನೇ ಅತ್ಯುತ್ತಮವಾದ ಬೀಡಿ ಮತ್ತು ಗಣಿ ಕಾರ್ಮಿಕರ ಆಸ್ಪತ್ರೆಯನ್ನು ಯಾದಗಿರಿಯಲ್ಲಿ ನಿರ್ಮಿಸಲಾಗುತ್ತಿದ್ದು, ರೂ.20 ಕೋಟಿ ವೆಚ್ಚದ ಈ ಹವಾನಿಯಂತ್ರಿತ ಆಸ್ಪತ್ರೆಯು 2012 ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಹೇಳಿದರು.
ನಗರದಲ್ಲಿರುವ ಬೀಡಿ ಮತ್ತು ಗಣಿ ಕಾರ್ಮಿಕರ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಹಿನ್ನೆಲೆಯಲ್ಲಿ ಸದ್ಯಕ್ಕಿರುವ ಆಸ್ಪತ್ರೆಯನ್ನು ದಿನೇಶ ಶರ್ಮಾ ಕಾಂಪ್ಲೆಕ್ಸ್ಗೆ ಸ್ಥಳಾಂತರಿಸುವ ಸಮಾರಂದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಹಾಗೂ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದಾಗಿ ಯಾದಗಿರಿಯಲ್ಲಿ ಒಳ್ಳೆಯ ಆಸ್ಪತ್ರೆ ನಿರ್ಮಾಣ ಆಗುತ್ತಿದೆ. ಈ ಆಸ್ಪತ್ರೆಯಲ್ಲಿ ಬೀಡಿ ಮತ್ತು ಗಣಿ ಕಾರ್ಮಿಕರಿಗಾಗಿ 37 ಕ್ಕೂ ಹೆಚ್ಚು ಚಿಕಿತ್ಸೆಗಳನ್ನು ಉಚಿತವಾಗಿ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸದರಿ ಆಸ್ಪತ್ರೆಯಲ್ಲಿ ಪ್ರಮುಖವಾಗಿ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಸುಮಾರು ರೂ.2 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಈ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಕಾಲೇಜು ಶಿಕ್ಷಣದವರೆಗೆ ಪ್ರತಿ ವರ್ಷ ರೂ. 10 ಸಾವಿರದಿಂದ ರೂ.20 ಸಾವಿರದವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಕಾರ್ಮಿಕರು ಮನೆ ಕಟ್ಟಿಕೊಳ್ಳುವುದಕ್ಕೆ ರೂ.40 ಸಾವಿರದವರೆಗೆ ಯಾವುದೇ ವಾಪಸಾತಿ ಇಲ್ಲದೇ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಒದಗಿಸುತ್ತಿರುವ ಜನೋಪಯೋಗಿ ಕೆಲಸಗಳನ್ನು ಪರಿಗಣಿಸಬೇಕು.
ಬರಿ ಭರವಸೆಗಳನ್ನು ನೀಡುವ ಬೇರೆ ಪಕ್ಷಗಳ ಅಗ್ಗದ ಪ್ರಚಾರ, ಹಣದ ಪ್ರಭಾವಕ್ಕೆ ಒಳಗಾಗದೇ, ನಿರಂತರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಮಿಕ ಕಲ್ಯಾಣ ಇಲಾಖೆ ಆಯುಕ್ತ ಜಿ. ಗೋಪಾಲ, ವೈದ್ಯರಾದ ಡಾ. ಉಮೇಶ ಬಿರಾದಾರ, ಡಾ. ಉಮೇಶ ಜಾಧವ, ಡಾ. ಶೋಭಾ, ಡಾ. ಸುಭಾಷ ಕರಣಿಗಿ ವೇದಿಕೆಯಲ್ಲಿದ್ದರು.
ಶ್ರೀನಿವಾಸರೆಡ್ಡಿ ಕಂದಕೂರ, ತೇಜಪ್ಪಗೌಡ, ಶರಣಗೌಡ ಅರಿಕೇರಿ, ಲಾಯಕ್ ಹುಸೇನ್ ಬಾದಲ್, ರುಸ್ತುಂ ಅಲಿ ಮುಲ್ಲಾ, ಸತ್ಯನಾರಾಯಣ ಗೌರ್, ದಿನೇಶ ಶರ್ಮಾ, ಮೂರ್ತಿ ಅನಪೂರ, ರವಿ ಮಾಲಿಪಾಟೀಲ, ಮರೆಪ್ಪ ಬಿಳ್ಹಾರ, ಗಾಳೆಪ್ಪ ಪೂಜಾರಿ, ಸ್ಯಾಮಸನ್ ಮಾಳಿಕೇರಿ, ರಾಜಶೇಖರ, ರಾಹುಲ್ ಅರಿಕೇರಿ, ಸಿಬ್ಬಂದಿಗಳಾದ ವೆಂಕಟೇಶ ಜಕಾತಿ, ಸುಧಾ, ನೂರಾರು ಬೀಡಿ ಕಾರ್ಮಿಕರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.