ಹುಮನಾಬಾದ್: ಬಸ್ ನಿಲ್ದಾಣ ಹೊರಗೆ ಕಾಲಿಟ್ಟರೆ ಸಾಕು ಒಂದಕಿಂತ ಒಂದು ಆಕರ್ಷಕ ಹೋಟೆಲಗಳ ಸಾಲು, ಒಳಗಡೆ ಹೋದರೆ ಕೆಲ ಹೋಟೆಲಗಳಲ್ಲಿ ಮಲಯಿ ಸ್ವಾದದೊಂದಿಗೆ ತಂಪು ಪಾನೀಯ, ಇನ್ನು ಕೆಲವೆಡೆ ಗರಂ ಗರಂ ಸ್ಪೆಷಲ್ ಚಹಾ! ಇನ್ನೂ ಕೆಲವು ಹೋಟೆಲನಲ್ಲಿ ಗರ್ಮಾ ಗರಂ ಮಿರ್ಚಿ ಭಜಿ, ಕೆಲ ಕಡೆ ಟೇಸ್ಟ್ಫುಲ್ ಕೇಕ್ ಮೊದಲಾದ ಬೇಕ್ರಿ ಐಟಂಗಳು ಇನ್ನೂ ಹಲವೆಡೆ ಪಾನ್ ಮಸಾಲಾ ಅಂಗಡಿಗಳು ಆ ಮೂಲಕ ಸಂಚರಿಸುವ ಪಾದಚಾರಿಗಳನ್ನು ಕೈಬೀಸಿ ಕರೆಯುತ್ತವೆ.
ಆಕರ್ಷಣೆ ನೋಡಿ ಒಳಗೆ ಹೋದರೆ ಸಾಕು ಮೇಲೆ ಹೆಸರಿಸಲಾದ ಬಣ್ಣಬಣ್ಣದ ವಿವಿಧ ಐಟಂಗಳು
ಬಾಯಿ ಚಪ್ಪರಿಸುತ್ತ ತಿನ್ನುವುದಕ್ಕೆ ಸಿಗುತ್ತವೆ. ವ್ಹಾ ! ಹುಮನಾಬಾದ್ಗೆ ಇಂಥದೊಂದು ಆಕರ್ಷಕವಾದ ಅಂಗಡಿ ಅಗತ್ಯವಿತ್ತು ಎಂಬ ಮಾತು ಅಲ್ಲಿದ್ದ ಎಲ್ಲರ ಬಾಯಿಯಿಂದ ಕೇಳಿ ಬರುತ್ತದೆ. ಹಾಂ! ಅಂದಹಾಗೆ ಮುಂದೆ ಬಂದ ಮಹನೀಯರು ಸಮಯ ಸಿಕ್ಕರೇ ಒಂದೇ ಒಂದುಬಾರಿ ಆ ಅಂಗಡಿ, ಹೋಟೆಲಗಳ ಹಿಂದೆ ಹೋಗಿ ನೋಡಿದರೆ ಸಾಕು ತಿಂದ ಎಲ್ಲ ಐಟಂಗಳು ವಾಂತಿ ಮೂಲಕ ಹೊರಗೆ ಬರುತ್ತವೆ.
ಎದುರಿಗೆ ಏನೆಲ್ಲ ಆಕರ್ಷಣೆ ಇರೋ ಹೋಟೆಲಗಳ ಹಿಂದೆ ಇರುವುದಾರೂ ಏನಪ್ಪ ಅಂತಿರಾ? ಇಲ್ಲಿದೆ ಅದಕ್ಕೆ ಉತ್ತರ ಹೋಟೆಲ ಮತ್ತು ಅಂಗಡಿಗಳ ಹಿಂದೆ ತೆರೆದ ಬಾವಿಯೊಂದಿದೆ. ಅದರ ಸುತ್ತಲು ಹೋಟೆಲಗಳಿಂದ ಹರಿದು ಬರುವ ಕೊಚ್ಚೆನೀರು.
ಕೊಚ್ಚೆಯಲ್ಲಿ ಸದಾ ಮಿಯ್ಯುವ ಹಂದಿಗಳ ಜಾತ್ರೆ. ಅಡುಗೆ ಕೋಣೆಯಲ್ಲಿ ಯಾರೂ ಇಲ್ಲದಿದ್ದಾಗ ಸಿದ್ಧಪಡಿಸಲಾದ ಐಟಂ ತುಂಬಿದ ಕಡಾಯಿಗಳಿಗೆ ಬಾಯಿ ಹಾಕಿ ಟೇಸ್ಟ್ ನೋಡಿದರೂ ಅಶ್ವರ್ಯ ಪಡಬೇಕಿಲ್ಲ. ಈ ಎಲ್ಲವುಗಳ ಮಧ್ಯೆ ಈ ಮೇಲೆ ಹೇಳಲಾದ ತೆರೆದ ಬಾವಿಗೆ ಈ ಎಲ್ಲ ಕೊಚ್ಚೆನೀರು ನೇರ ಸೇರುತ್ತಿತ್ತು. ಅದೇ ಬಾವಿ ನೀರಿನಿಂದ ಐಟಂ ತಯ್ಯಾರಿಸುವುದು ಮತ್ತು ಗ್ರಾಹಕರಿಗೆ ಕುಡಿಯುವುದಕ್ಕೂ ನೀಡಲಾಗುತ್ತಿತ್ತು ಅಲ್ಲ ಈಗಲೂ ನೀಡಲಾಗುತ್ತಿದೆ ಅನ್ನೋದು ಆ ಭಾಗದ ಮಂದಿಯ ಆರೋಪ.
ಮೇಲಿನ ಎಲ್ಲ ವಿಷಯ ಹೇಳುವುದರ ಹಿಂದೆ ಹೋಟೆಲ ಮತ್ತಿತರ ಅಂಗಡಿಗಳನ್ನು ಮುಚ್ಚಿಸುವ ದುರಾಲೋಚನೆ ಖಂಡಿತಾ ಇಲ್ಲ. ಇರುವುದರಲ್ಲೇ ಸಾರ್ವಜನಿಕರಿಗೆ ರೋಗ ತಗಲದ ರೀತಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಉತ್ತಮ ಪರಿಸರ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಹೋಟೆಲಗಳು ತಮ್ಮ ಜವಾಬ್ದಾರಿ ಅರಿತು ವ್ಯಾಪಾರ ನಡೆಸಲಿ ಎಂಬ ಸದುದ್ದೇಶ.
ಏನ್ಮಾಡ್ತಿದ್ದಾರೆ?: ಅರೆ ಈ ಎಲ್ಲ ವಿಷಯ ಗೊತ್ತಿದ್ದರೂ ಈ ಎಲ್ಲವುಗಳನ್ನು ಯಾರು ನಿಯಂತ್ರಿಸುತ್ತಾರೆ? ಸಂಬಂಧಪಟ್ಟ ಪುರಸಭೆ ಆಡಳಿತ ಮಂಡಳಿ, ನೈರ್ಮಲ್ಯ ವಿಭಾಗ, ಆರೋಗ್ಯ ಸಂಬಂಧಪಟ್ಟ ಮೊದಲಾದ ಇಲಾಖೆ ಅಧಿಕಾರಿಗಳಿಗೆ ಇದೆಲ್ಲ ಗೊತ್ತಿಲ್ಲವೇ ? ಎಲ್ಲ ಗೊತ್ತಿದ್ದರೂ ಉದ್ದೇಶಪೂರ್ವಕ ಮೌನಕ್ಕೆ ಶರಣಾಗಿದ್ದಾರೇ? ಎಂಬ ಹತ್ತು ಹಲವು ಪ್ರಶ್ನೆಗಳು ಉದ್ಭವಿಸದೇ ಇರವು.
ವಿಶೇಷವಾಗಿ ಮಳೆಗಾಲ ಇರುವ ಕಾರಣ ವಿವಿಧ ರೋಗಗಳು ಹರಡು ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಗರ ಸಂಚಾರ ನಡೆಸಿ, ಹೊಟೆಗಳನ್ನು ಪರಿಶೀಲಿಸಿ, ಸ್ವಚ್ಛತೆ ಕಾಪಾಡಲು ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ನಾಗರೀಕರ ವಿಶ್ವಾಕ್ಕೆ ಪಾತ್ರರಾಗಬೇಕು ಎನ್ನುವುದು ಪ್ರಾಜ್ಞಾವಂತರ ಒತ್ತಾಸೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.