ನವದೆಹಲಿ: 26/11ರಂದು ಮುಂಬೈ ಮೇಲೆ ನಡೆದ ದಾಳಿಯಲ್ಲಿ `ದೇಶ ರಹಿತ' ಭಾರತೀಯರ ಕೈವಾಡವಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.
ಮುಂಬೈ ದಾಳಿಯ ಸಂಚು ನಡೆಸಿದ್ದ ಅಬು ಜುಂದಾಲ್ ಭಾರತೀಯ ಬೇಹುಗಾರಿಕಾ ಸಂಸ್ಥೆಗಳ ಏಜೆಂಟ್ ಆಗಿದ್ದ ಎಂದು ಭಾರತ ಪ್ರವಾಸ ಅಂತ್ಯಗೊಳಿಸುವ ಮುನ್ನ ಮಲಿಕ್ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ, ಅಲ್ ಖೈದಾ ಉಗ್ರ ಇಲ್ಯಾಸ್ ಕಾಶ್ಮೀರಿ, ಪಾಕಿಸ್ತಾನ ಸೇನಾಪಡೆಯ ನಿವೃತ್ತ ಮೇಜರ್ ಹಾಗೂ ಭಾರತೀಯ ಮೂಲದ `ದೇಶ ರಹಿತ'ರಾದ ಅಬು ಜುಂದಾಲ್, ಜಬಿಯುಲ್ಲಾ ಹಾಗೂ ಫಾಹೀಮ್ ಅನ್ಸಾರಿ ಈ ದೇಶ ರಹಿತರು ಎಂದು ಮಲಿಕ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಭಾರತದ ಬೇಹುಗಾರಿಕಾ ಪಡೆಗಳ ವೈಫಲ್ಯದಿಂದ ಈ ದಾಳಿ ನಡೆದಿದೆ. ಎರಡೂ ದೇಶಗಳ ಬೇಹುಗಾರಿಕಾ ಸಂಸ್ಥೆಗಳ ನಡುವೆ ಸಂವಹನ ಇರದಿರುವುದು ಇದಕ್ಕೆ ಕಾರಣ ಎಂದೂ ಮಲಿಕ್ ಅಭಿಪ್ರಾಯ ಪಟ್ಟಿದ್ದಾರೆ.
ಖಂಡನೆ: ಮಲಿಕ್ ಹೇಳಿಕೆಯನ್ನು ಬಲವಾಗಿ ಖಂಡಿಸಿರುವ ಭಾರತ, ಇದು ಹಾಸ್ಯಾಸ್ಪದ ಹೇಳಿಕೆ. ದಾಳಿ ನಡೆದಾಗ ಅಬು ಜುಂದಾಲ್, `ಲಷ್ಕರ್-ಎ- ತೈಯಬಾ' ಪರವಾಗಿ ಕೆಲಸ ಮಾಡುತ್ತಿದ್ದ ಎಂದು ಸ್ಪಷ್ಟಪಡಿಸಿದೆ.