ಚಿತ್ರದುರ್ಗ: ಜನಪ್ರಿಯ ಶಿಕ್ಷಕ, ಯುವ ಲೇಖಕ, ನಗರದ ಬೋವಿ ಕಾಲೊನಿಯ ಮಾದರಿ ಶಾಲೆ ಅಭಿವೃದ್ಧಿಗೆ ಶ್ರಮಿಸಿದ ಉತ್ಸಾಹಿ ಪಿ. ಚಂದ್ರಶೇಖರಯ್ಯ (32) ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕೆಇಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಆನೆ ಕನ್ನಂಬಾಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಚಂದ್ರಶೇಖರಯ್ಯ ಕರ್ತವ್ಯ ನಿರ್ವಹಿಸುತ್ತಿದ್ದರು.
ಗುರುವಾರ ಬೆಳಗಿನ ಜಾವ ಮಾಳಪ್ಪನಹಟ್ಟಿ ಕ್ರಾಸ್ ಬಳಿಯ ಚಂದ್ರವಳ್ಳಿ ಬೆಟ್ಟದ ಮೇಲೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರ್ಗದರ್ಶನಕ್ಕಾಗಿ ದಾರಿಯುದ್ದಕ್ಕೂ ಹೊಸ ಇಸ್ಪೀಟ್ ಎಲೆಗಳನ್ನು ಚೆಲ್ಲಿ ಶವ ಹುಡುಕಲು ನೆರವಾಗುವಂತೆ ದಾರಿಯ ನಕಾಶೆ ಸಹ ಬರೆದಿಟ್ಟಿದ್ದರು. ಜತೆಗೆ, ಛಾಪಾ ಕಾಗದದಲ್ಲಿ ಮರಣಪತ್ರ ಬರೆದಿದ್ದು, ಜೀವನದಲ್ಲಿ ಜುಗುಪ್ಸೆಗೊಂಡು ಈ ಕಠಿಣ ಹಾದಿ ಹಿಡಿದಿರುವುದಾಗಿ ತಿಳಿಸಿದ್ದಾರೆ.
ಶಿಕ್ಷಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ತರಬೇತಿ ಶಿಬಿರಗಳನ್ನು ಯಶಸ್ವಿಗೊಳಿಸಿಕೊಟ್ಟ ಚಂದ್ರಶೇಖರಯ್ಯನವರು ಪರಿಣಾಮಕಾರಿ ಓದು, ಶಿಕ್ಷಣ ದರ್ಶನ, ಗುಡಾರ ಶಾಲೆ, ಉದುರಿದ ಹೂವು, ಸಾಹಿತಿ ಸಂಕುಲ ಮೊದಲಾದ ಕೃತಿಗಳನ್ನು ರಚಿಸಿ ಶಿಕ್ಷಕ ಸಮೂಹದಲ್ಲಿ ಜನಾನುರಾಗಿಯಾಗಿ ಬೆರೆತಿದ್ದರು.
ಅವಿವಾಹಿತರಾಗಿದ್ದ ಚಂದ್ರಶೇಖರಯ್ಯ ಅವರಿಗೆ ತಂದೆ, ತಾಯಿ, ಅಣ್ಣ, ತಮ್ಮ ಇದ್ದಾರೆ. ನಗರದ ರುದ್ರಭೂಮಿಯಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನಡೆಯಿತು.