ಬೆಂಗಳೂರು: ಮೊದಲನೇ ವಿಧಾನಸಭೆಗೆ (1952) ಚಿತ್ರದುರ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಮುಲ್ಕಾ ಗೋವಿಂದ ರೆಡ್ಡಿ (97) ಸೋಮವಾರ ಬೆಳಗಿನ ಜಾವ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗದಲ್ಲಿ ನಡೆಯಲಿದೆ.
ಮುಲ್ಕಾ ಅವರಿಗೆ ಇಬ್ಬರು ಪತ್ನಿಯರು. ಇಬ್ಬರೂ ಈಗ ಇಲ್ಲ. ಮೊದಲ ಪತ್ನಿಗೆ ಐವರು ಪುತ್ರಿಯರು ಮತ್ತು ಇಬ್ಬರು ಪುತ್ರರು. ಪುತ್ರರು ನಿಧನರಾಗಿದ್ದಾರೆ. ಎರಡನೇ ಪತ್ನಿಗೆ ಇಬ್ಬರು ಪುತ್ರಿಯರು.
ನೇರ – ನಿಷ್ಠುರ ನಡೆಗೆ ಹೆಸರಾಗಿದ್ದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಚಿತ್ರದುರ್ಗ ಕ್ಷೇತ್ರದಿಂದ ರೈತ ಸಂಘದ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದರು (1945- –1949). ರೈತರ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದ ಅವರು ಅಪ್ಪಟ ಸಮಾಜವಾದಿ.
1952ರಲ್ಲಿ ಪ್ರಜಾ ಸೊಷಲಿಸ್್ಟ ಪಕ್ಷದ ವತಿಯಿಂದ ಮೊದಲನೇ ವಿಧಾನಸಭೆಗೆ ಆಯ್ಕೆಯಾಗಿ ಪಿಎಸ್ಪಿ ಉಪನಾಯಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.
ನಂತರ ನಾಲ್ಕು ಬಾರಿ ರಾಜ್ಯಸಭೆ (1958- – 1982) ಸದಸ್ಯರಾಗಿದ್ದರು. ಮೊದಲ ಮೂರು ಬಾರಿ ಪಿಎಸ್ಪಿ, ಒಮ್ಮೆ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದರು. ಸಂಸತ್ತಿನ ನೂರು ಅಧಿವೇಶನಗಳಲ್ಲಿ ಭಾಗವಹಿಸಿದ ಗೌರವ ಕೂಡ ಅವರಿಗೆ ಸಂದಿತ್ತು. 2003ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮುಲ್ಕಾ ಸೇರಿದಂತೆ ಒಟ್ಟು ಆರು ಮಂದಿಯನ್ನು ಈ ಸಲುವಾಗಿ ಗೌರವಿಸಲಾಗಿತ್ತು
ವಿಧಾನಸಭೆಗೆ 60 ವರ್ಷ ತುಂಬಿದ ನಿಮಿತ್ತ ಕಳೆದ ವರ್ಷ ಏರ್ಪಡಿಸಿದ್ದ ವಜ್ರ ಮಹೋತ್ಸವ ಸಮಾರಂಭದಲ್ಲಿಯೂ ಅವರನ್ನು ಸನ್ಮಾನಿಸಲಾಗಿತ್ತು.
ಅಂತಿಮ ನಮನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರದ ಮಾಜಿ ಸಚಿವರಾದ ಎಸ್.ಎಂ.ಕೃಷ್ಣ, ಎಂ.ವಿ.ರಾಜಶೇಖರನ್, ಸಚಿವರಾದ ಎಚ್.ಕೆ.ಪಾಟೀಲ, ರಾಮಲಿಂಗಾರೆಡ್ಡಿ, ಶಾಸಕ ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಹಲವರು ಮೃತರ ರಾಜಾಜಿನಗರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಮೃತರ ಕುಟುಂಬದ ಸಂಪರ್ಕಕ್ಕೆ – 94489 04385
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.