ತಿ.ನರಸೀಪುರ: ಮೂಕಾಸುರ ವಧೆಯ ಪುಣ್ಯಕ್ಷೇತ್ರ, ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮೂಗೂರು ಗ್ರಾಮದೇವತೆ ತ್ರಿಪುರಸುಂದರಿ ಅಮ್ಮನವರ ಬಂಡಿ ಉತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಸಾಂಪ್ರಾದಾಯಿಕ ವಿಧಿ ವಿಧಾನಗಳೊಂದಿಗೆ ದೇವತೆಗೆ ಪೂಜೆ ಸಲ್ಲಿಸಿ ದೇವಾಲಯದ ಒಳಾವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ನಂತರ ಈಡುಗಾಯಿ ಒಡೆಯುವ ಕಾರ್ಯ ನಡೆಯಿತು. ದೇವತೆಯ ಉತ್ಸವಮೂರ್ತಿಯನ್ನು ರುದ್ರಾಕ್ಷಿ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಮೇಲೆ ಮೊದಲ ಬಂಡಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಬಂಡಿ ಮಂಟಪದಲ್ಲಿ ದೇವಿಗೆ ಪೂಜೆ, ಮಂಗಳಾರತಿ ಮಾಡುವ ಮೂಲಕ ಬಂಡಿ ಓಟಕ್ಕೆ ಚಾಲನೆ ನೀಡಲಾಯಿತು. ಲಕ್ಷಾಂತರ ರೂಪಾಯಿಗಳ ಬೆಲೆ ಬಾಳುವ ಎತ್ತುಗಳನ್ನು ಬಂಡಿಗೆ ಕಟ್ಟಿ ಓಡಿಸಿಸುವ ಮೂಲಕ ರೈತರು ಸಂಭ್ರಮಿಸಿದರು.
ಇದೇ ವೇಳೆ ಸುತ್ತ ಮುತ್ತಲಿನ ಗ್ರಾಮಗಳಿಂದ ಬಂದಿದ್ದ ಹಾಗೂ ತ್ರಿಪುರಸುಂದರಿ ಒಕ್ಕಲು ಮನೆತನದ ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು. ಭಕ್ತರಿಗೆ ವಿವಿಧ ಸೇವಾ ಸಮಿತಿಗಳಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮದ ಪ್ರಮುಖರು, ಸರ್ವ ಜನಾಂಗದ ಮುಖಂಡರು, ದೇವಾಲಯದ ಪ್ರಧಾನ ಅರ್ಚಕ ಸಮೂಹದವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.