ಮೂಡಿಗೆರೆ: ತಾಲ್ಲೂಕಿನ ಕೆಲವು ಭಾಗದಲ್ಲಿ ಹಗಲು ರಾತ್ರಿ ಧಾರಾಕಾರ ಮಳೆ ಬೀಳುತ್ತಿದ್ದು,ಪಟ್ಟಣದ ಸುತ್ತಲೂ ಹಗಲಲ್ಲಿ ಬಿಡುವು ನೀಡಿ ರಾತ್ರಿ ಧಾರಾಕಾರ ಮಳೆ ಬೀಳುತ್ತಿದೆ.
ರೋಹಿಣಿ ಮಳೆ ಆರ್ಭಟಕ್ಕೆ ತಾಲ್ಲೂಕಿನ ಚಿನ್ನಿಗ ಗ್ರಾಮದ ಶಾಲೆಯ ಗೋಡೆ ಕುಸಿದಿದೆ, ಬಿಳಗಲಿ,ಬಿರ್ಗೂರು ಶಾಲೆಗಳಿಗೆ ಹಾನಿ ಸಂಭವಿಸಿದ್ದು, ಕಂದಾಯ ಇಲಾಖೆ ಮಾಹಿತಿಯಂತೆ ಇಲ್ಲಿಯವರೆಗೆ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಹೇಮಾವತಿ ನದಿಯಲ್ಲಿ ಹೆಚ್ಚಿನ ನೀರು ಹರಿಯುತ್ತಿದೆ.ಚಿಕ್ಕಪುಟ್ಟ ಹಳ್ಳ ತುಂಬಿ ಹರಿಯುತ್ತಿವೆ. ಗೋಣಿಬೀಡು ಹೋಬಳಿ ವ್ಯಾಪ್ತಿಯ ಊರುಬಗೆ ಸೇತುವೆ ಶೀಥಿಲಗೊಂಡಿದ್ದು, ಇದೇ ರೀತಿ ಮಳೆ ಸುರಿದರೆ ಸದ್ಯದ್ಲ್ಲಲೇ ಸಂಚಾರಕ್ಕೆ ತೊಂದರೆಯಾಗಬಹುದು.
ಹಾನಿಗೀಡಾದ ಸೇತುವೆ ತಕ್ಷಣ ದುರಸ್ಥಿಗೊಳಿಸುವಂತೆ ತಾಲ್ಲೂಕು ಆಡಳಿತಕ್ಕೆ ಹತ್ತಾರು ಬಾರಿ ಮನವಿ ಮಾಡಲಾಗಿದೆ ಎಂದು ಸತ್ತಿಗನಹಳ್ಳಿ ಪ್ರಕಾಶ್ ಹೇಳಿದರು.
ತಾಲ್ಲೂಕಿನ ಅತಿವೃಷ್ಟಿ ಪೀಡಿತ ಪ್ರದೇಶಗಳಾದ ದೇವರುಂದ, ಮೆಕನಗದ್ದೆ, ಜಿ.ಹೊಸಹಳ್ಳಿ, ಊರುಬಗೆ,ಸತ್ತಿಗನಹಳ್ಳಿ,ಬೈರಾಪುರ,ಮೂಲರಹಳ್ಳಿ,ಗುತ್ತಿ,ತರುವೆ,ಕೊಟ್ಟಿಗೆಹಾರ, ಮಲಯಮಾರುತ ಆಲೇಖಾನ್, ಚಾರ್ಮಾಡಿ ಘಾಟಿ, ಮಲೆಮನೆ ಮುಂತಾದ ಪಶ್ಚಿಮ ಘಟ್ಟ ಪ್ರದೇಶ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನಕ್ಕೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಭಾರಿ ಮಳೆ ಹಾಗೂ ಕೆಲವೆಡೆ ರಸಗೊಬ್ಬರದ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ನಿಗದಿತ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ಆರಂಭವಾಗಿಲ್ಲ,ಕಸಬಾ ಗೋಣಿಬೀಡು ಹೋಬಳಿ ಕೆಲವು ಭಾಗದಲ್ಲಿ ಮಾತ್ರ ಕೃಷಿ ಚಟುವಟಿಕೆ ಆರಂಭಿಸಿ ಭತ್ತದ ಸಸಿ ಮಡಿ ಮಾಡುವ ಕಾರ್ಯ ಆರಂಭಿಸಲಾಗಿದೆ.