ಆಂಜನೇಯ ವಿಗ್ರಹಗಳ ಪೈಕಿ ದೇಶದಲ್ಲೇ ಅತಿ ದೊಡ್ಡದನ್ನು, ಬುಧವಾರ, ಮೈಸೂರಿನಲ್ಲಿ ಅನಾವರಣಗೊಳಿಸಲಾಗಿದೆ .(ಡಿ. 27ರ ಪ್ರ. ವಾ. ಸುದ್ದಿ) ಹೀಗೆ ಎತ್ತೆತ್ತರಕ್ಕೆ ಬೆಳೆಯುತ್ತಿರುವುದು, ಜನರ `ಧರ್ಮಶ್ರದ್ಧೆ' ಯೋ? ಹಳ್ಳಕ್ಕೆ ಬೀಳುವ ಕುರಿತನವೋ? ಸರದಾರ-ಶ್ರೀಮಂತಿಕೆಯ ಅಟ್ಟಹಾಸವೋ?
ಶಿಲಾವಿಗ್ರಹಗಳಷ್ಟೇ ಅಲ್ಲ; ಪುರಾಣದಲ್ಲೆೀಲ್ಲೂ ಕೇಳರಿಯದ ಮುಖಮುದ್ರೆಯ ಕಾನ್ಕ್ರೀಟ್ ದೇವರುಗಳೂ ಮುಗಿಲುಮುಟ್ಟುತ್ತಿದ್ದಾರೆ. ಈ ನವಶ್ರೀಮಂತರು, ಪುರಾತನ, ಪುರಾತತ್ತ್ವ ಮಹತ್ವದ ಶಿಲ್ಪ, ಸಂಸ್ಕೃತಿ ತಾಣಗಳಿಗೂ ಲಗ್ಗೆ ಹಾಕುತ್ತಿರುವುದು ಆಘಾತಕಾರಿ. ಇಂಥದೊಂದು ಆಘಾತ, ಹಿರೇಮಗಳೂರಿನ ಶ್ರೀರಾಮ ದೇವಸ್ಥಾನದಲ್ಲಿ ಧುತ್ತೆಂದು ಆಯಿತು. ಕಣ್ಣನ್ ಅವರ ಸದಾಶಯಗಳನ್ನು ಬಿಂಬಿಸುವಂತೆಯೇ ಗ್ರಾನೈಟಿನ ಈ ನಯಹಾಸುಗಲ್ಲು, ಕಂಬದ ಬೃಹದ್ರಚನೆಗಳು, ಎಂಬ ಮೆಚ್ಚಿನಿಂದಲೇ ಒಳಹೊಕ್ಕೆ.
ಆದರಿವು ಹೊಯ್ಸಳರ ಮುದ್ದಾದ ಕಿರುದೇಗುಲವನ್ನು ಸಂಪೂರ್ಣ ನುಂಗಿಹಾಕಿಬಿಟ್ಟಿರುವುದು, ಹೌಹಾರುವಂತೆ ಮಾಡಿತು! ಪಾಜುಕದ ಮಧ್ವಾಚಾರ್ಯರ ಹುಟ್ಟಿನ ದೈನ್ಯಶೀಲ ಕಿರುಮನೆ, ಆತ್ಯಾಧುನಿಕ ಅರಮನೆಯಾಗಿ ಅರಳುತ್ತಿದೆ.ಐತಿಹಾಸಿಕ ತಾಣಗಳನ್ನು, ಪುರಾತತ್ತ್ವ ಇಲಾಖೆ, ವೈಜ್ಞಾನಿಕವಾಗಿ ಜೀರ್ಣೋದ್ಧಾರ ಮಾಡಿಸಲಿ. ಆದರೆ ಅದನ್ನು ರಿಯಲ್ ಎಸ್ಟೇಟ್ ತಿಮಿಂಗಿಲಗಳಿಗೊಪ್ಪಿಸುವುದು, ಮಹನೀಯರುಗಳ ತತ್ತ್ವಾದರ್ಶಗಳನ್ನು ಧಿಕ್ಕರಿಸಿದಂತಾಗುತ್ತದೆ.