ಇವರಲ್ಲಿ ಪಟ್ಟಣದಲ್ಲಿ ಕೂಲಿ ಕೆಲಸ ಇಲ್ಲವೇ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರೇ ಹೆಚ್ಚು. ಕೆಲಸ ಮುಗಿಸಿಕೊಂಡು ಮನೆಗೆ ಬರಬೇಕಾದರೆ ಬೆಂಗಳೂರು ರಸ್ತೆಯಿಂದ ಗ್ರಾಮದವರೆಗೂ ವಿದ್ಯುತ್ ದೀಪಗಳಿಲ್ಲದೆ ಕತ್ತಲಿನಲ್ಲೇ ಭಯದಿಂದ ಹೆಜ್ಜೆ ಹಾಕಬೇಕಿದೆ. ಈ ಬಗ್ಗೆ ಪುರಸಭೆಗೆ ಅನೇಕ ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ತಮ್ಮ ಅಸಹಾಯಕತೆಯನ್ನು `ಪ್ರಜಾವಾಣಿ'ಯೊಂದಿಗೆ ಹಂಚಿಕೊಂಡರು.
ಗ್ರಾಮಕ್ಕೆ ಹೋಗಬೇಕಾದರೆ ರಸ್ತೆ ಇಲ್ಲ. ತಾತ್ಕಾಲಿಕವಾಗಿ ಖಾಸಗಿಯವರ ಜಮೀನಿನಲ್ಲಿ ಜನರು ಓಡಾಡುತ್ತಿದ್ದಾರೆ. ಖಾಸಗಿ ರೂರಲ್ ಡೆವಲಪ್ಮೆಂಟ್ ಸಂಸ್ಥೆಯವರು ಚರಂಡಿಗಳನ್ನು ಮಾಡಿಸಿದ್ದಾರೆ. ಬೃಹತ್ ಗಾತ್ರದ ಶೌಚಾಲಯದ ಗುಂಡಿ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಆದರೆ ಚರಂಡಿಗಳ ನೀರು ಗ್ರಾಮದ ಹೊರಗಡೆ ಹರಿಯಲು ಸ್ಥಳಾವಕಾಶವಿಲ್ಲದೆ ತುಂಬಿಕೊಂಡು ಕೆಟ್ಟ ವಾಸನೆ ಬರುತ್ತಿದೆ. ಇಲ್ಲಿನ ನಿವಾಸಿಗಳಿಗೆ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಪ್ರತಿಯೊಂದು ರಸ್ತೆಯಲ್ಲಿ ಖಾಲಿ ನಿವೇಶನಗಳಲ್ಲಿ ಹುಲ್ಲು, ಪಾರ್ಥೇನಿಯಂ ಗಿಡಗಳು ಹೇರಳವಾಗಿ ಬೆಳೆದು ನಿಂತಿವೆ. ಇವುಗಳನ್ನು ಸ್ವಚ್ಛ ಮಾಡಿಲ್ಲ. ಎನ್ನುತ್ತಾರೆ ಇಲ್ಲಿನ ನಿವಾಸಿ ಸರೋಜಮ್ಮ.