ಮಾಲೂರು: ತಾಲ್ಲೂಕಿನ ಚಿಕ್ಕ ತಿರುಪತಿ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಬರುವ ಭಕ್ತರಿಗೆ ಮೂಲ ಸೌಲಭ್ಯವಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ದೇಗುಲಕ್ಕೆ ರಾಜ್ಯವೂ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಈ ಸಂದರ್ಭ ಅತ್ಯಗತ್ಯವಾಗಿ ಬೇಕಾದ ಮೂಲ ಸೌಕರ್ಯ ಸಿಗುತ್ತಿಲ್ಲ ಎಂಬ ದೂರು ಭಕ್ತರದ್ದು.
ದೇಗುಲಕ್ಕೆ ಲಕ್ಷಾಂತರ ರೂಪಾಯಿ ವರಮಾನವಿದ್ದರೂ; ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಕುಡಿಯುವ ನೀರು, ಶೌಚಾಲಯ, ವಸತಿ, ಸ್ನಾನಗೃಹಗಳ ಸೌಲಭ್ಯವಿಲ್ಲದೆ ಭಕ್ತರು ಪರದಾಡುವುದು ತಪ್ಪಿಲ್ಲ. ಮುಡಿ ತೆಗೆಸಿಕೊಂಡ ಭಕ್ತರು ಸ್ನಾನ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ನಿತ್ಯ ಸಾವಿರಕ್ಕೂ ಹೆಚ್ಚು ಮಂದಿ ದೇವರ ದರ್ಶನಕ್ಕೆ ಬರುತ್ತಾರೆ. ಆದರೆ ಬೆರಳಣಿಕೆಯಷ್ಟು ಶೌಚಾಲಯ ಹಾಗೂ ಸ್ನಾನದ ಕೊಠಡಿ ಇರುವುದರಿಂದ ಅನಾನುಕೂಲವಾಗಿದೆ ಎಂದು ತಮಿಳುನಾಡು ಕೃಷ್ಣಗಿರಿಯ ರಾಜನ್ `ಪ್ರಜಾವಾಣಿ~ ಬಳಿ ಅಳಲು ವ್ಯಕ್ತ ಪಡಿಸಿದರು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದರಿಂದ ಅಭಿವೃದ್ಧಿಗೆ ತೊಂದರೆಯಾಗಿದೆ. ಭಕ್ತರಿಗೆ ಮೂಲ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿರುವ ಸಮಿತಿಯ ಸದಸ್ಯರಾಗಿರಲು ಆಸಕ್ತಿಯಿಲ್ಲದೆ ರಾಜೀನಾಮೆ ನೀಡಲು ಸಿದ್ಧರಾಗಿರುವುದಾಗಿ ಸಮಿತಿ ಸದಸ್ಯ ವೆಂಕಟೇಶ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.