ಆನೇಕಲ್: ರಾಜ್ಯದ ಮೃಗಾಲಯಗಳಲ್ಲಿ 20 ವರ್ಷಗಳಿಂದ ಅರೆಕಾಲಿಕ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ 400 ಮಂದಿ ನೌಕರರನ್ನು ಶೀಘ್ರದಲ್ಲಿಯೇ ಕಾಯಂಗೊಳಿಸಲಾಗುವುದು ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ನಂಜುಂಡಸ್ವಾಮಿ ತಿಳಿಸಿದರು.
ಅವರು ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆಡಳಿತ ಕಚೇರಿಗೆ ಭೂಮಿ ಪೂಜೆ, ದೋಣಿ ವಿಹಾರ ಮತ್ತು ಪ್ರಾಣಿಗಳ ಆಹಾರ ಬೇಯಿಸಲು ನೂತನ ಪಾಕಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
`ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಿನದಿಂದ ದಿನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಉದ್ದೇಶದಿಂದ ಉದ್ಯಾನದೊಳಗಿನ ಕಾವಲು ಕೆರೆಯಲ್ಲಿ ದೋಣಿವಿಹಾರವನ್ನು ಸೋಮವಾರದಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ.
ಇದಕ್ಕೆ ಪ್ರವಾಸಿಗರ ಸ್ಪಂದನ ಹೇಗಿದೆ ಎಂಬುದನ್ನು ನೋಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆ ಮಾಡಲಾಗುವುದು~ ಎಂದರು.
ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ ಆರ್ ರಾಜು ಮಾತನಾಡಿ, `ಚಿಟ್ಟೆ ಉದ್ಯಾನವನದ ಸಮೀಪದಲ್ಲಿ ಬೃಹತ್ ಮತ್ತು ಸುಸಜ್ಜಿತ ಆಡಳಿತ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗಿದೆ. ಇದರ ನಿರ್ಮಾಣದ ಅಂದಾಜು ವೆಚ್ಚ ಸುಮಾರು ಒಂದೂವರೆ ಕೋಟಿ ರೂಪಾಯಿ. ಇದರ ಕಾಮಗಾರಿಯನ್ನು ಹತ್ತು ತಿಂಗಳಲ್ಲಿ ಮುಗಿಸುವ ಉದ್ದೆೀಶವಿದೆ ಎಂದು ಅವರು ತಿಳಿಸಿದರು.
ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಮುದ್ದಣ್ಣ, ಶಂಕರೇಗೌಡ, ಪಶುವೈದ್ಯಾಧಿಕಾರಿ ಚೆಟ್ಟಿಯಪ್ಪ, ಎಂಜಿನಿಯರ್ ಚಂದ್ರಶೇಖರ್ ಹಾಜರಿದ್ದರು.