ಬೆಂಗಳೂರು: ಮೇಘಾಲಯ ಮತ್ತು ಕರ್ನಾಟಕ ಸರ್ಕಾರದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆಯಿತು.
ಮೇಘಾಲಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಅಬು ತಹೇರ್ ಮೊಂಡೆಲ್ ಮಾತನಾಡಿ, `ಒಂದು ಕಾಲದಲ್ಲಿ ಮೇಘಾಲಯ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೆಸರುವಾಸಿಯಾಗಿತ್ತು. ಆದರೆ, ಇಂದು ಈ ಎರಡೂ ಕ್ಷೇತ್ರಗಳಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಈ ಕಾರಣಕ್ಕಾಗಿ ಶಿಕ್ಷಣಕ್ಕಾಗಿ ಬೆಂಗಳೂರಿನಂತಹ ನಗರಗಳಿಗೆ ಜನರು ವಲಸೆ ಬರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಉತ್ತಮ ಸಂಬಂಧ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಮೊದಲ ಸಾಂಸ್ಕೃತಿಕ ವಿನಿಮಯ ಹಮ್ಮಿಕೊಳ್ಳಲಾಗಿದೆ' ಎಂದರು.
`ಮೇಘಾಲಯದ ವಾರ್ತಾ ಇಲಾಖೆಯಲ್ಲಿ ಒಂದು ಘಟಕವನ್ನು ಸ್ಥಾಪಿಸಲಾಗಿದ್ದು, ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಮೇಘಾಲಯದ ಜನರು ಸಮಸ್ಯೆಯಲ್ಲಿ ಸಿಲುಕಿದಾಗ ಈ ಘಟಕವನ್ನು ಸಂಪರ್ಕಿಸಬಹುದು' ಎಂದು ತಿಳಿಸಿದರು.
ಸಮಾರಂಭದಲ್ಲಿ ಮೇಘಾಲಯದ ಕಲಾವಿದರು ವಿವಿಧ ನೃತ್ಯಗಳನ್ನು ಹಾಗೂ ರಾಜ್ಯದ ಕಲಾವಿದರು ಡೊಳ್ಳು ಕುಣಿತ, ಭರತನಾಟ್ಯ, ಕೊಡವ ನೃತ್ಯ ಪ್ರದರ್ಶಿಸಿದರು.
ಮೇಘಾಲಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎಚ್ಎಂ.ಶಾಂಗ್ಪ್ಲಿಯಾಂಗ್ ಉಪಸ್ಥಿತರಿದ್ದರು.
ಉಪನ್ಯಾಸ ಕಾರ್ಯಕ್ರಮ
ಬೆಂಗಳೂರು: ಬಸವ ಸಮಿತಿಯ ವತಿಯಿಂದ ಅರಿವಿನ ಮನೆ 741ನೇ ಜ್ಞಾನ ದಾಸೋಹ ಕಾರ್ಯಕ್ರಮದ ಅಂಗವಾಗಿ ಸೋಮವಾರ (ಡಿ.17) `ಆರೋಗ್ಯ ಮತ್ತು ಆಯುರ್ವೇದ' ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ